ಬೆಂಗಳೂರು:- ಗೃಹ ಸಚಿವರಾಗಲು ಜಿ ಪರಮೇಶ್ವರ್ ಸಮರ್ಥರಲ್ಲ ಎಂಬ ಹೆಚ್ ಕುಮಾರಸ್ವಾಮಿ ಹೇಳಿಕೆಗೆ ಪರಮೇಶ್ವರ್ ಟಾಂಗ್ ಕೊಟ್ಟಿದ್ದಾರೆ.
ಗೃಹ ಸಚಿವ ಆಗಲು ನಾನು ಸಮರ್ಥನಿಲ್ಲ ಎಂದು ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ಹೇಳಿದ್ದಾರೆ. ಅದು ನನಗೆ ಬಹಳ ಸಂತೋಷ ತಂದಿದೆ. ಅವರು ಹೇಳಿದ್ದಕ್ಕೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ಕಾನೂನು ಸುವ್ಯವಸ್ಥೆ ಸರಿಯಾಗಿರಬೇಕು. ನಾನು ಮೂರ್ನಾಲ್ಕು ಬಾರಿ ಗೃಹ ಸಚಿವನಾಗಿದ್ದೇನೆ. ಸಮರ್ಥವಾಗಿ ನಾನು ಎಲ್ಲವನ್ನೂ ನಿಭಾಯಿಸಿದ್ದೇನೆ. ನನ್ನ ಸಾಮರ್ಥ್ಯ ರಾಜ್ಯದ ಜನರಿಗೆ ಗೊತ್ತಿದೆ ಎಂದು ಗೃಹ ಸಚಿವ ಡಾ. ಪರಮೇಶ್ವರ್ ಹೇಳಿದ್ದಾರೆ.
ವಿಧಾನಸೌಧದಲ್ಲಿ ಸಂಪುಟ ಉಪಸಮಿತಿ ಸಭೆ ನಡೆಸಲಾಗಿದೆ. ಬಿಜೆಪಿ ಕಾಲದ ಹಗರಣಗಳ ತನಿಖೆಗೆ ಸಮಿತಿ ರಚಿಸಲಾಗಿದೆ. ನಾವು ಇಂದು ಮೊದಲ ಸಭೆ ಮಾಡಿದ್ದೇವೆ. ಮೂರ್ನಾಲ್ಕು ಕೇಸ್ಗಳನ್ನು ತನಿಖೆಗೆ ಕೊಡುವ ಬಗ್ಗೆ ನಿರ್ಧಾರ ಮಾಡಿದ್ದೇವೆ. 2 ತಿಂಗಳೊಳಗೆ ವರದಿ ಕೊಡಿ ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ. ಅದರಂತೆ ನಾವು ಕೊಡುತ್ತೇವೆ. ಸುಮಾರು ವರ್ಷಗಳ ಪ್ರಕರಣಗಳು ಬಾಕಿ ಇವೆ. ನಮ್ಮ ಸರ್ಕಾರದ ಪ್ರಕರಣಗಳೂ ಇವೆ. ಎಲ್ಲವನ್ನೂ ತನಿಖೆ ಮಾಡಬೇಕಿದೆ ಎಂದು ಡಾ. ಜಿ. ಪರಮೇಶ್ವರ್ ಹೇಳಿದ್ದಾರೆ.
ಈ ಸಭೆಯಲ್ಲಿ ಬಿಜೆಪಿ ಅವಧಿಯ ಹಗರಣಗಳ ತನಿಖೆ ಕುರಿತು ಚರ್ಚೆ ನಡೆಸಲಾಗಿದೆ. ಯಾವ್ಯಾವ ಪ್ರಕರಣಗಳ ತನಿಖೆಯಾಗಬೇಕು? ಯಾವ ಪ್ರಕರಣಗಳು ತನಿಖೆಯಾಗಿದೆ? ಯಾವ ಪ್ರಕರಣಗಳ ತನಿಖಾ ವರದಿ ಸಲ್ಲಿಕೆಯಾಗಿದೆ? ಉಳಿದ ಯಾವ ಪ್ರಕರಣಗಳ ವರದಿ ಸಲ್ಲಿಕೆಯಾಗಬೇಕು? ಮಧ್ಯಂತರ ವರದಿ ಸಲ್ಲಿಕೆಯಾದ ಪ್ರಕರಣ ಯಾವುವು? ಎಂಬುದರ ಕುರಿತು ಸಮಿತಿ ಸಭೆಯಲ್ಲಿ ಗಂಭೀರ ಚರ್ಚೆ ನಡೆಸಲಾಗಿದೆ.
ಹಾಲಿನ ದರ ಏರಿಕೆ ವಿಚಾರವಾಗಿ ಇದು ನನ್ನ ಇಲಾಖೆಗೆ ಬರುವುದಿಲ್ಲ. ಅದು ಪಶುಸಂಗೋಪನೆ ಇಲಾಖೆಗೆ ಬರುತ್ತದೆ. ಅದರ ಬಗ್ಗೆ ನನಗೆ ಗೊತ್ತಿಲ್ಲ. ಕೆಪಿಎಸ್ಸಿ ಗ್ರೂಪ್ ಬಿ ಪರೀಕ್ಷೆ ಮುಂದೂಡಿಕೆ ವಿಚಾರವಾಗಿ ನನಗೆ ಮಾಹಿತಿಯಿಲ್ಲ ಎಂದು ವಿಧಾನಸೌಧದಲ್ಲಿ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹೇಳಿದ್ದಾರೆ.