ಬೆಂಗಳೂರು:– ಸಿಎಂ ರಾಜೀನಾಮೆ ಕೊಡುವ ಅವಶ್ಯಕತೆಯಿಲ್ಲ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಂಗಳವಾರ ಹೈಕೋರ್ಟ್ ಸೂಕ್ಷ್ಮವಾಗಿ ತನಿಖೆಗೆ ಆದೇಶ ಮಾಡಿದೆ. 17ಎ ಅಡಿ ತನಿಖೆಗೆ ಅನುಮತಿ ಕೊಟ್ಡಿದೆ. ಕೋರ್ಟ್ 218 ಬಿಎನ್ಎಸ್ಎಸ್ ಅಡಿ ತಿರಸ್ಕಾರ ಮಾಡಿದೆ. ಸಿಎಂ ಕೂಡಾ ತನಿಖೆ ಮಾಡಲಿ ಎಂದು ಹೇಳಿದ್ದಾರೆ. ನಾವೇ ಮೊದಲು ನ್ಯಾಯಾಂಗ ರಚನೆ ಮಾಡಿದ್ದೇವೆ. ನಾವು ತನಿಖೆಯಿಂದ ಹಿಂದೆ ಸರಿಯಲ್ಲ. ತನಿಖೆ ಆಗಲಿ ಎಂದು ತಿಳಿಸಿದರು.
ರಾಜ್ಯಪಾಲರ ಕಚೇರಿ ದುರ್ಬಳಕೆ ಆಗಿದೆ. ಬಿಜೆಪಿಗೆ ರಾಜ್ಯಪಾಲರು ಸ್ಟೇಷನ್ ಹೌಸ್ ಆಗಿದ್ದಾರೆ. ರಾಜ್ಯಪಾಲರು ಕಾನೂನು ಪ್ರಕಾರ ಆದೇಶ ಕೊಡಬೇಕು. ಆದರೆ ಅದನ್ನು ಮಾಡಿಲ್ಲ. ಹೀಗಾಗಿ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಪ್ರಶ್ನೆ ಇಲ್ಲ ಎಂದಿದ್ದಾರೆ.
ಸಿಎಂ ರಾಜೀನಾಮೆ ಕೇಳುವ ಬಿಜೆಪಿ ಅವರಿಗೆ ನೈತಿಕತೆ ಇದೆಯಾ? ಯಡಿಯೂರಪ್ಪ ಕೇಸ್ ಬಗ್ಗೆ, ಮುನಿರತ್ನ ಬಗ್ಗೆ ಮಾತಾಡಿದ್ದಾರಾ, ಪ್ರಜ್ವಲ್ ಕೇಸ್ ಬಗ್ಗೆ ಮಾತಾಡಿದ್ದಾರಾ? ಎಲ್ಲಿ ಹೋಗಿತ್ತು ಇವರ ನೈತಿಕತೆ? ವಿಜಯೇಂದ್ರ ಮೇಲೂ ಕೇಸ್ ಇದೆ. ಇವರು ನಮಗೆ ನೈತಿಕತೆ ಹೇಳೋದಾ? ಎಂದು ಕಿಡಿಕಾರಿದರು.
ತನಿಖೆ ಆಗದೇ ಗಲ್ಲಿಗೆ ಹಾಕುವುದು ಎಷ್ಟು ಸರಿ. ನೈತಿಕತೆ ಬಗ್ಗೆ ಮಾತಾಡುವ ಇಚ್ಛೆಯಿದ್ದರೆ ಬಿಜೆಪಿ ಅವರು ಬರಲಿ. ಗಾಂಧಿ ಪ್ರತಿಮೆ ಮುಂದೆ ಚರ್ಚೆಗೆ ಬರಲಿ ಎಂದು ಸವಾಲ್ ಹಾಕಿದ್ದಾರೆ.