ಬೆಂಗಳೂರು:- ಕೇಂದ್ರದಿಂದ ಕರ್ನಾಟಕಕ್ಕೆ ಯಾವುದೇ ಅನ್ಯಾಯ ಆಗಿಲ್ಲ ಎಂದು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,15ನೇ ಹಣಕಾಸು ಆಯೋಗದ ಶಿಫಾರಸಿನಂತೆ ಕೇಂದ್ರವು ತನ್ನ ‘ವಿಶೇಷ ಅನುದಾನ’ದ ಬಾಕಿ ಪಾಲನ್ನು ಬಿಡುಗಡೆ ಮಾಡುತ್ತಿಲ್ಲ ಎಂಬ ಕರ್ನಾಟಕ ಸರ್ಕಾರದ ಹೇಳಿಕೆಯನ್ನು ಇಂದು ತಳ್ಳಿಹಾಕಿದ ನಿರ್ಮಲಾ ಸೀತಾರಾಮನ್, ಹಣಕಾಸು ಆಯೋಗದ ಅಂತಹ ಯಾವುದೇ ಶಿಫಾರಸು ಇಲ್ಲ ಎಂದು ಸ್ಪಷ್ಟಪಡಿಸಿದರು.
ರಾಜ್ಯಕ್ಕೆ 5,495 ಕೋಟಿ ರೂಪಾಯಿ ವಿಶೇಷ ಅನುದಾನವನ್ನು ಬಿಡುಗಡೆ ಮಾಡಿಲ್ಲ ಎಂದು ಸರ್ಕಾರ ಹೇಳುತ್ತದೆ. ಆದರೆ ಇದು ಸಂಪೂರ್ಣ ಸುಳ್ಳು. ಹಣಕಾಸು ಆಯೋಗವು ತನ್ನ ಅಂತಿಮ ವರದಿಯಲ್ಲಿ ಅಂತಹ ಯಾವುದೇ ವಿಶೇಷ ಅನುದಾನವನ್ನು ಶಿಫಾರಸು ಮಾಡಿಲ್ಲ ಎಂದರು.
ಕರ್ನಾಟಕಕ್ಕೆ ಬರಬೇಕಾದ ಪ್ರತಿಯೊಂದು ಪೈಸೆಯನ್ನು ಸಕಾಲದಲ್ಲಿ ನೀಡಲಾಗಿದೆ ಮತ್ತು ನೀಡಲಾಗುತ್ತದೆ ಎಂದು ನಿಮಗೆ ವಿವರವಾಗಿ ಹೇಳಲು ನಾನು ಬಯಸುತ್ತೇನೆ ಎಂದರು.
2014 ಮತ್ತು 2024 ರ ನಡುವೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಅವಧಿಯಲ್ಲಿ ತೆರಿಗೆ ಹಂಚಿಕೆ ಶೇಕಡಾ 258 ರಷ್ಟು ಹೆಚ್ಚಾಗಿದೆ. ಇದು ಹಿಂದಿನ ಯುಪಿಎ (ಕಾಂಗ್ರೆಸ್ ನೇತೃತ್ವದ ಮಿತ್ರ ಪಕ್ಷಗಳ ಒಕ್ಕೂಟ) ಆಡಳಿತದ 10 ವರ್ಷಗಳಿಗೆ ಹೋಲಿಸಿದರೆ ಇದು 3.5 ಪಟ್ಟು ಹೆಚ್ಚಾಗಿದೆ. ಅಂದರೆ, 10 ವರ್ಷಗಳ ಬಿಜೆಪಿ ಆಡಳಿತದಲ್ಲಿ ರಾಜ್ಯಕ್ಕೆ ನೀಡಿದ ಅನುದಾನವು 273 ಪ್ರತಿಶತ ಹೆಚ್ಚಳವಾಗಿದೆ ಎಂದರು.
ಯುಪಿಎ ಸರ್ಕಾರದ ಅವಧಿಯಲ್ಲಿ 2004 ರಿಂದ 2014 ರ ನಡುವೆ ಕರ್ನಾಟಕಕ್ಕೆ ವರ್ಷಕ್ಕೆ 81,795 ಕೋಟಿ ರೂಪಾಯಿ ಬಂದಿತ್ತು. ಆದರೆ, ಬಿಜೆಪಿ ಸರ್ಕಾರದ ಅವಧಿಯಲ್ಲಿ 2014 ರಿಂದ 2024 ರವರೆಗೆ 2,93,226 ಕೋಟಿ ರೂಪಾಯಿ ಅನುದಾನ ನೀಡಲಾಗಿದೆ ಎಂದು ಹಣಕಾಸು ಸಚಿವರು ಹೇಳಿದರು.