ಗದಗ: ಮುಡಾ ಹಗರಣದಲ್ಲಿ ಸಿದ್ದರಾಮಯ್ಯ ಅವರು ಕಾಲಿನ ಮೇಲೆ ಒಂದು ಕಲ್ಲು ಹಾಕಿಕೊಳ್ಳುವ ಬದಲು ಹತ್ತಾರು ಕಲ್ಲು ಹಾಕಿಕೊಂಡು, ಔಷಧಿ ಇಲ್ಲದ ಹಾಗೆ ಮಾಡಿಕೊಂಡಿದ್ದಾರೆ. ಕಾನೂನು ಇದೆ, ಕಾನೂನು ಯಾವ ರೀತಿ ತೀರ್ಮಾನ ಮಾಡುತ್ತೆ ನೋಡೋಣ. ಸಿಎಂ ನಾನು ಒಟ್ಟಿಗೆ ರಾಜಕೀಯಕ್ಕೆ ಬಂದವರು. ಮುಡಾ ಪ್ರಕರಣ ಜಗತ್ ಜಾಹೀರವಾಗಿದೆ. ಅದನ್ನು ಸಿಎಂ ಅರ್ಥ ಮಾಡಿಕೊಳ್ಳುತ್ತಿಲ್ಲ. ನಾವು ಬೇರೆ ಭಾಷೆಯಲ್ಲಿ ಮಾತನಾಡಲು ಆಗೋದಿಲ್ಲ, ನಮಗೆ ಸಂಸ್ಕಾರ ಇದೆ ಎಂದು ಕೇಂದ್ರ ಸಚಿವ ವಿ ಸೋಮಣ್ಣ ಸಿಎಂ ವಿರುದ್ಧ ಕಿಡಿಕಾರಿದ್ದಾರೆ.
ನಗರದ ಪ್ರವಾಸಿ ಮಂದಿರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜಿ ಟಿ ದೇವೇಗೌಡ ಅವರು ಸಿಎಂ ಪರ ಯಾಕೆ ಮಾತನಾಡಿದರು ಎಂದು ಅವರನ್ನೇ ಕೇಳಬೇಕು, ಅವ್ರು ಸೀನಿಯರ್ ರಾಜಕಾರಣಿ. ಯಾಕೆ ಹೀಗೆ ಹೇಳ್ತಾರೆ ಅದು ಅವರಿಗೆ ಗೊತ್ತಿದೆ ಎಂದು ವ್ಯಂಗ್ಯವಾಡಿದರು. ಶಾಸನ ಸಭೆಯಲ್ಲಿ ಸೈಟ್ ವಾಪಸ್ ಕೊಡಬೇಕಾಗಿತ್ತು. ಆರ್ ಅಶೋಕ್ನ ಸೈಟ್ ವಿಚಾರವನ್ನು ಇಟ್ಟುಕೊಂಡಿದ್ದೀರಿ.
ಈ ಪ್ರಕರಣಕ್ಕೆ ಏನು ಸಂಬಂಧ. ಅಶೋಕ್ ಆಗಲೇ ವಾಪಸ್ ನೀಡಿದ್ರು, ನೀವು ಕೂಡ ಆವಾಗಲೇ ಕೊಡಬೇಕಾಗಿತ್ತು. ಸಿಎಂ ಸ್ಥಾನ ಶಾಶ್ವತವಲ್ಲ. ವ್ಯವಸ್ಥೆಯಲ್ಲಿ ಯಾರು ದೊಡ್ಡವರಲ್ಲ. ಕಾನೂನು ಎಲ್ಲರಿಗೂ ಒಂದೇ ಎಂದು ಟಾಂಗ್ ನೀಡಿದರು. ಈ ವೇಳೆ ಬಿಜೆಪಿ (BJP) ಜಿಲ್ಲಾಧ್ಯಕ್ಷ ರಾಜು ಕುರುಡಗಿ, ಕಾಂತಿಲಾಲ ಬಣಸಾಲಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.