ಹುಬ್ಬಳ್ಳಿ: ನಗರದ ಕ್ಷಮತಾ ಸಂಸ್ಥೆ ಹಾಗೂ ಜಿ.ಬಿ.ಜೋಶಿ ಮೆಮೋರಿಯಲ್ ಟ್ರಸ್ಟ್ ವತಿಯಿಂದ ಫೆ.೨೩ ರಿಂದ ೨೫ ರವರೆಗೆ ನಗರದ ದೇಶಪಾಂಡೆನಗರದ ಸವಾಯಿ ಗಂಧರ್ವ ಕಲಾಮಂದಿರದಲ್ಲಿ 3 ದಿನಗಳವರೆಗೆ ಪಂ.ಕುಮಾರ ಗಂಧರ್ವರ ಜನ್ಮಶತಾಬ್ಧಿ ಸಂಗೀತೋತ್ಸವ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿದೆ ಎಂದು ಕ್ಷಮತಾ ಸಂಸ್ಥೆ ಅಧ್ಯಕ್ಷ ಗೋವಿಂದ್ ಜೋಶಿ ಹೇಳಿದರು.
ನಗರದಲ್ಲಿಂದು ಮಾತನಾಡಿದ ಅವರು, ಫೆ.೨೩ರಂದು ಸಂಜೆ ೫.೩೦ ಕ್ಕೆ ಸಂಗೀತೋತ್ಸವ ಉದ್ಘಾಟನೆ ಗೊಳ್ಳಲಿದ್ದು, ಮುಖ್ಯ ಅತಿಥಿಗಳಾಗಿ ಜೀವವಿಮಾ ನಿಗಮದ ದಕ್ಷಿಣ ಮಧ್ಯ ವಿಭಾಗದ ವಲಯ ಪ್ರಬಂಧಕ ಎಲ್. ಕೆ.ಶ್ಯಾಮಸುಂದರ ಹಾಗೂ ಪದ್ಮಶ್ರೀ ಪುರಸ್ಕೃತರಾದ ನೇತ್ರತಜ್ಞ ಡಾ. ಎಂ.ಎಂ.ಜೋಶಿ ಆಗಮಿಸಲಿದ್ದಾರೆಂದ ಅವರು ಅಂದು ಸಂಜೆ.೬.೩೦ ಕ್ಕೆ ಜೈಪುರ-ಅತ್ರೌಲಿ ಘರಾಣೆಯ ಪ್ರತಿಭಾವಂತ ಗಾಯಕಿ ಪುಣೆಯ ಯಶಸ್ವಿ ಸರಪೋತದಾರ ಅವರ ಗಾಯನದೊಂದಿಗೆ ಸಂಗೀತೋತ್ಸವಕ್ಕೆ ಚಾಲನೆ ದೊರೆಯಲಿದೆ ಎಂದರು.
ಫೆ. ೨೪ ರಂದು ಸಂಜೆ.೫.೩೦ ಕಿರಾನಾ ಘರಾಣೆಯ ಪ್ರತಿಭೆ ಕೊಲ್ಕತ್ತಾದ ವಿದುಷಿ ಮನಾಲಿ ಬೋಸ್ ಅವರ ಸುಮಧುರ ಕಂಠದಿಂದ ಸಪ್ತಸ್ವರಗಳು ರಿಂಗಣಿಸಲಿವೆ. ಫೆ.೨೫ ರಂದು ಸಂಜೆ ೫.೩೦ ಕ್ಕೆ ಕುಮಾರ ಗಂಧರ್ವ ಜನ್ಮಶತಾಬ್ದಿ ಸಂಗೀತೋತ್ಸವದ ಸಮಾರೋಪ ಸಮಾರಂಭ ಕಾರ್ಯಕ್ರಮ ಜರುಗಲಿದೆ. ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಶಾಸಕ ಅರವಿಂದ್ ಬೆಲ್ಲದ್, ಎಲ್.ಐ.ಸಿ ಧಾರವಾಡ ವಿಭಾಗದ ಹಿರಿಯ ಪ್ರಬಂಧಕ ಕೆ.ವೆಂಕಟರಮಣ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.
ಅಂದು ಹಿರಿಯ ಕಲಾವಿದರಾದ ಪಂ.ಬಿ.ಎಸ್. ಮಠ್ ಹಾಗೂ ಅಕ್ಕಮಹಾದೇವ ಮಠ, ರಘುನಾಥ್ ನಾಕೋಡ್, ರೇಣುಕಾ ನಾಕೋಡ್, ಶ್ರೀನಿವಾಸ ಜೋಶಿ, ಕೃಷ್ಣರಾವ್ ಇನಾಂದಾರ್ ಅವರನ್ನು ಸನ್ಮಾನ ಮಾಡಲಾಗುವುದು ಎಂದರು. ಅವರು, ಅಂದು ಸಂಜೆ ೭ ಗಂಟೆಗೆ ನವದೆಹಲಿಯ ಲಕ್ಷ್ಯ ಮೋಹನ ಹಾಗೂ ಆಯುಷ ಮೋಹನ್ ಸಹೋದರರ ಸಿತಾರ-ಸರೋದ ವಾದನಗಳ ಜುಗಲ್ ಬಂದಿಯೊಂದಿಗೆ ಸಂಗೀತೋತ್ಸವಕ್ಕೆ ತೆರೆ ಬೀಳಲಿದೆ ಎಂದರು. ಧಾರವಾಡ ಬಿಜೆಪಿ ಜಿಲ್ಲಾಧ್ಯಕ್ಷ ತಿಪ್ಪಣ್ಣ ಮಜ್ಜಗಿ, ಎಂ.ಎಂ.ಮಳಗಿ, ಸಮೀರ್ ಜೋಶಿ ಉಪಸ್ಥಿತರಿದ್ದರು.