ಭಾರೀ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಎಜುಟೆಕ್ ಕಂಪನಿ ಬೈಜೂಸ್ಗೆ ಇದೀಗ ಮತ್ತೊಂದು ಹಿನ್ನಡೆ ಉಂಟಾಗಿದೆ. ಕಂಪನಿಯ ಮಾತೃ ಸಂಸ್ಥೆ ಥಿಂಕ್ ಆಂಡ್ ಲರ್ನ್ ಪ್ರೈ. ಲಿ.ನ (ಟಿಎಲ್ಪಿಎಲ್) ಸಲಹಾ ಸಮಿತಿಯಿಂದ ಶೀಘ್ರದಲ್ಲೇ ಎಸ್ಬಿಐ ಮಾಜಿ ಮುಖ್ಯಸ್ಥ ರಜನೀಶ್ ಕುಮಾರ್ ಹಾಗೂ ಉದ್ಯಮಿ ಮೋಹನ್ದಾಸ್ ಪೈ ಹೊರಹೋಗಲಿದ್ದಾರೆ. ಸಲಹಾ ಸಮಿತಿಯ ಅವಧಿ ಜೂನ್ 30, 2024 ರಂದು ಕೊನೆಗೊಳ್ಳಲಿದ್ದು, ಇದರ ಸದಸ್ಯರು ತಮ್ಮ ಒಪ್ಪಂದಗಳನ್ನು ನವೀಕರಿಸಲು ಬಯಸುತ್ತಿಲ್ಲ.
ಸ್ವತಃ ಕಂಪನಿ ಹಾಗೂ ಸಲಹಾ ಮಂಡಳಿ ಸದಸ್ಯರೇ ಇದನ್ನು ಬಹಿರಂಗಪಡಿಸಿದ್ದಾರೆ. ರಜನೀಶ್ ಕುಮಾರ್ ಮತ್ತು ಮೋಹನ್ದಾಸ್ ಪೈ ಥಿಂಕ್ ಆಂಡ್ ಲರ್ನ್ ಸಂಸ್ಥಾಪಕರೊಂದಿಗೆ ಚರ್ಚಿಸಿದ ನಂತರ ಸಲಹಾ ಮಂಡಳಿಯನ್ನು ತೊರೆಯಲು ನಿರ್ಧರಿಸಿದ್ದಾರೆ ಎಂದು ಬೈಜೂಸ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ನಗದು ಕೊರತೆ ಎದುರಿಸುತ್ತಿರುವ ಬೈಜೂಸ್ ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿ (ಎನ್ಸಿಎಲ್ಟಿ) ಯಲ್ಲಿ ಮಧ್ಯಸ್ಥಗಾರರೊಂದಿಗೆ ಕಾನೂನು ಹೋರಾಟ ನಡೆಸುತ್ತಿದೆ. ಇದೇ ಸಮಯದಲ್ಲಿ ಈ ನಿರ್ಧಾರ ಹೊರಬಿದ್ದಿದೆ.
Railway Jobs: ರೈಲ್ವೆ ಇಲಾಖೆಯಲ್ಲಿ ಬಂಪರ್ ಉದ್ಯೋಗಾವಕಾಶ..! ತಿಂಗಳಿಗೆ 56,000 ಸಂಬಳ
ಎಸ್ಬಿಐನ ಮಾಜಿ ಅಧ್ಯಕ್ಷ ರಜನೀಶ್ ಕುಮಾರ್ ಮತ್ತು ಇನ್ಫೋಸಿಸ್ನ ಮಾಜಿ ಹಣಕಾಸು ಅಧಿಕಾರಿ ಟಿವಿ ಮೋಹನ್ದಾಸ್ ಪೈ ಅವರು ತಮ್ಮ ಜಂಟಿ ಹೇಳಿಕೆಯಲ್ಲಿ, “ಸಲಹೆಗಾರರಾಗಿ ಕಂಪನಿಯೊಂದಿಗಿನ ನಮ್ಮ ಸಂಬಂಧ ಒಂದು ವರ್ಷದ್ದಾಗಿತ್ತು. ಸಂಸ್ಥಾಪಕರೊಂದಿಗಿನ ಚರ್ಚೆಯ ನಂತರ ಸಲಹಾ ಮಂಡಳಿಯ ಅಧಿಕಾರಾವಧಿಯನ್ನು ವಿಸ್ತರಿಸುವುದು ಬೇಡ ಎಂಬ ನಿರ್ಧಾರಕ್ಕೆ ಬರಲಾಯಿತು,” ಎಂದು ತಿಳಿಸಿದ್ದಾರೆ.