ಚಾಮರಾಜನಗರ: ದಿವಂಗತ ರಾಜಶೇಖರ್ ಮೂರ್ತಿರವರು ನನ್ನ ರಾಜಕೀಯ ಗುರುಗಳು ಎಂದು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್.ಬಾಲರಾಜ್ ಹೇಳಿದ್ದಾರೆ.
ಗುಂಡ್ಲುಪೇಟೆ ತಾಲೂಕಿನ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಈ ದೇಶಕ್ಕೆ ಮೋದಿಯವರು ಅನಿವಾರ್ಯ ಎಂಬುದು ಕಟ್ಟೆಕಡೆಯ ಗ್ರಾಮದ ವ್ಯಕ್ತಿಗೆ ಅರಿವಿದೆ. ಸೋಲಿಗ ಜನಾಂಗದ ವ್ಯಕ್ತಿ ಮೋದಿಯವರನ್ನು ನೆನೆಸಿಕೊಳ್ಳುತ್ತಾರೆ. ನಾನು ಯಾವುದೇ ಊರಿಗೆ ಹೋದರು ಅಲ್ಲಿನ ಜನರು ಮೋದಿ ಬಗ್ಗೆ ಮಾತನಾಡುತ್ತಾರೆ. ಹೀಗಾಗಿ ಮೋದಿಯವರ ವರ್ಚಸ್ಸು ನಮ್ಮ ಗೆಲುವನ್ನು ಸುಲಭ ಮಾಡಿಕೊಟ್ಟಿದೆ
ಬಿವೈ ವಿಜಯೇಂದ್ರ ಅವರು ರಾಜ್ಯಾಧ್ಯಕ್ಷರಾದ ಬಳಿಕ ಸಂಘಟನೆ ಅತ್ಯುತ್ತಮವಾಗಿದೆ. ರಾಜಕೀಯಕ್ಕೆ ಬಂದಿದ್ದೇ ನಾನು ರಾಜಶೇಖರಮೂರ್ತಿ ಅವರ ಗರಡಿಯಿಂದ ಎಂದು ಹೇಳುವ ಮೂಲಕ ಮಾಜಿ ಕೇಂದ್ರ ಸಚಿವ ದಿ.ರಾಜಶೇಖರಮೂರ್ತಿ ನೆನಪು ಮೆಲಕು ಹಾಕಿದ್ದಾರೆ. ನನ್ನಲ್ಲಿ ಶಾಸಕನಾಗುವ ಅರ್ಹತೆ ಇದೆ ಎಂದು ಗುರುತಿಸಿದ್ದು ರಾಜಶೇಖರಮೂರ್ತಿ ಅವರು. ಚುನಾವಣೆ ಖರ್ಚನ್ನು ಕೂಡ ಕೊಟ್ಟವರು ರಾಜಶೇಖರಮೂರ್ತಿ. ಅವರ ಮೂಲಕ ನನಗೆ ಯಡಿಯೂರಪ್ಪ ಪರಿಚಯ ಆದರು. ಬಿಎಸ್ ವೈ ಅವರು ನನಗೆ ಮೊದಲ ಬಾರಿಗೆ ಬಿಜೆಪಿ ಟಿಕೆಟ್ ಕೊಟ್ಟಿದ್ದರು. ಬಿಜೆಪಿ ಟಿಕೆಟ್ ಕೈತಪ್ಪಿದಾಗ ಪಕ್ಷೇತರ ಅಭ್ಯರ್ಥಿಯಾಗಿ ಜಯಗಳಿಸಿದ್ದೆ. ರಾಜಶೇಖರಮೂರ್ತಿ ಹಾಗು ವಾಜಪೇಯಿ ಅವರ ಫೋಟೋ ಮುಂದಿಟ್ಟುಕೊಂಡು ಚುನಾವಣೆ ಗೆದ್ದು ಬಂದಿದ್ದೆ ಎಂದರು.
ಬಿಎಸ್ ವೈ ಕೆಜೆಪಿ ಕಟ್ಟಿದಾಗ ನಾನು ಅವರನ್ನು ಹಿಂಬಾಲಿಸಿದ್ದವನು. ಹತ್ತು ವರ್ಷ ದುಡಿಸಿಕೊಂಡ ಕಾಂಗ್ರೆಸ್ ನನಗೆ ಅನ್ಯಾಯ ಮಾಡಿದೆ. ಮತ್ತೆ ನಾನು ಬಿಜೆಪಿಗೆ ಹಿಂತಿರುಗಿದಾಗ ಪಕ್ಷ ನನ್ನ ಕೈ ಹಿಡಿದಿದೆ. ಈಗ ಬಿಜೆಪಿ ಅಭ್ಯರ್ಥಿಯಾಗಿ ನಿಲ್ಲಲು ಪಕ್ಷ ನನಗೆ ಅವಕಾಶ ಕೊಟ್ಟಿದೆ.ರಾಜಕೀಯಕ್ಕೆ ಬಂದಾಗಿನಿಂದಲೂ ಜನರ ಕಷ್ಟಗಳಿಗೆ ಸ್ಪಂದಿಸಿದ್ದೇನೆ. ಕ್ಷೇತ್ರದ ಜನರ ಜೊತೆ ನಿಕಟವಾದ ಸಂಪರ್ಕ ಹೊಂದಿದ್ದೇನೆ. ನರ್ಸ್ ಆಗಿ ನನ್ನ ತಾಯಿ ಮಾಡಿದ ಪ್ರಾಮಾಣಿಕ ಸೇವೆ ಮಾಡಿದ್ದಾರೆ. ಜನರಿಗಾಗಿ ನನ್ನ ತಂದೆ ತಾಯಿ ಮಾಡಿದ ಸೇವೆಯನ್ನು ಸ್ಮರಿಸಿಕೊಳ್ಳುತ್ತೇನೆ. ಇಪ್ಪತ್ತು ವರ್ಷಗಳಿಂದ ನನಗೆ ರಾಜಕೀಯ ಅವಕಾಶ ಸಿಕ್ಕಿಲ್ಲ. ಈ ಬಾರಿ ನನಗೆ ಒಂದು ಅವಕಾಶ ಕೊಡಿ ನಿಮ್ಮ ಋಣ ತೀರಿಸುತ್ತೇನೆ. ಜ್ಯಾತ್ಯಾತೀತ ಜನತಾದಳ ಎನ್.ಡಿ.ಎ ಭಾಗವಾಗಿದೆ
ಜನತಾದಳ ತನ್ನದೇ ಆದ ಮತ ಬ್ಯಾಂಕ್ ಹೊಂದಿರುವುದು ನನಗೆ ಸಹಕಾರಿಯಾಗಿದೆ. ಹಾಲಿ ಸಂಸದರಾದ ವಿ.ಶ್ರೀನಿವಾಸ್ ಪ್ರಸಾದ್ ಅವರ ಆಶೀರ್ವಾದ ಇದೆ
ಎಂದು ಹೇಳಿದ್ದಾರೆ.