ಮಂಡ್ಯ : ನಗರದ ಕಲ್ಲಹಳ್ಳಿ ಗ್ರಾಮದ ಬಳಿ ಇರುವ ಸರ್ವೆ ನಂಬರ್ 391ರಿಂದ 395 ವರೆಗಿನ 111 ಗುಂಟೆ ಸರ್ಕಾರಿ ಜಮೀನಿನ ಸರ್ವೆ ಕಾರ್ಯ ನಡೆಸಿ ಹದ್ದುಬಸ್ತು ನಿಗದಿ ಮಾಡಲು ಮುಂದಾಗಬೇಕೆಂದು ತಹಶೀಲ್ದಾರ್ ಶಿವಕುಮಾರ್ ಬಿರಾದರ್ ಅವರಿಗೆ ಮಂಡ್ಯ ವಿಧಾನಸಭಾ ಕ್ಷೇತ್ರದ ಶಾಸಕ ರವಿಕುಮಾರ್ ಗೌಡ ಸೂಚಿಸಿದರು.
ಇಂದು ಬೆಳಿಗ್ಗೆ ಕಲ್ಲಹಳ್ಳಿ ಗ್ರಾಮಸ್ಥರೊಡನೆ ಸದರಿ ಸರ್ಕಾರಿ ಜಮೀನು ವೀಕ್ಷಣೆ ನಡೆಸಿದ ಶಾಸಕರು, ಸದರಿ ಜಾಗದ ಹದ್ದುಬಸ್ಸು ನಿಗದಿ ಮಾಡಿ, ಒತ್ತುವರಿ ತೆರವು ಮಾಡಬೇಕು ಮುಂದಿನ ಒಂದು ವಾರದೊಳಗೆ ಈ ಕಾರ್ಯ ಪೂರ್ಣಗೊಳಿಸಬೇಕೆಂದು ಸ್ಥಳದಲ್ಲಿದ್ದ ಭೂ ದಾಖಲೆಗಳ ಸಹಾಯಕ ನಿರ್ದೇಶಕಿ ಮಮತಾ ಹಾಗೂ ರಾಜಸ್ವ ನಿರೀಕ್ಷಕ ಪ್ರಭು ಅವರಿಗೆ ನಿರ್ದೇಶಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು, ಗ್ರಾಮಸ್ಥರು ಬೇಡಿಕೆಯನ್ನು ಮನ್ನಿಸಿ ಈಗಾಗಲೇ ಮುಡಾ ವತಿಯಿಂದ 5 ಕೋಟಿ ರೂ. ವೆಚ್ಚದ ಟೆಂಡರ್ ಪ್ರಕ್ರಿಯೆ ಚಾಲ್ತಿಯಲ್ಲಿದ್ದು, ಕೆರೆ ಅಭಿವೃದ್ದಿಗೆ ಆದ್ಯತೆ ನೀಡಲಾಗುತ್ತದೆ ಎಂದು ತಿಳಿಸಿದರು. ಸದರಿ ಸರ್ಕಾರಿ ಜಾಗದಲ್ಲಿ ನಿರ್ಮಿಸಲುದ್ದೇಶಿಸಿರುವ ಪ್ರಾಥಮಿಕ ಆರೋಗ್ಯ ಕೇಂದ್ರ, ಕನ್ನಡ ಭವನದ ಜೊತೆಗೆ ಗ್ರಾಮಸ್ಥರ ಬೇಡಿಕೆಯಂತೆ ರೈತರ ಅನುಕೂಲಕ್ಕೆ ಕಣ ಮತ್ತು ರಸ್ತೆ ನಿರ್ಮಾಣ ಮತ್ತು ಪಶು ಆಸ್ಪತ್ರೆ ನಿರ್ಮಾಣದ ಬಗ್ಗೆ ಗ್ರಾಮಸ್ಥರ ಜೊತೆ ಚರ್ಚಿಸಿ ಅಭಿವೃದ್ದಿಗೆ ಆದ್ಯತೆ ನೀಡಲಾಗುವುದೆಂದರು. ಗ್ರಾಮಸ್ಥರು ಸಹಕರಿಸಿದರೆ, ಸಾರ್ವಜನಿಕ ಅನುಕೂನಕ್ಕೆ ಅಗತ್ಯವಾಗುವ ಯೋಜನೆಯನ್ನು ಜಾರಿಗೊಳಿಸಲು ಮುಂದಾಗುತ್ತೇವೆ, ಇದಕ್ಕೆ ಎಲ್ಲರ ಸಹಕಾರ ಹಾಗೂ ಸಂಯಮ ಅಗತ್ಯವಾಗಿದ್ದು, ಅರಳಿಕಟ್ಟೆ ನಿರ್ಮಾಣ ಮತ್ತು ಬೋರ್ ವೆಲ್ ಅಳವಡಿಕೆಗೆ ಕ್ರಮ ವಹಿಸುವ ಭರವಸೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಆರ್.ಎ.ಪಿ.ಸಿ.ಎಂ.ಎಸ್ ನಿರ್ದೇಶಕ ಕೆ.ಸಿ.ರವೀಂದ್ರ, ನಗರಸಭಾ ಸದಸ್ಯ ಟಿ.ರವಿ, ಗ್ರಾಮದ ಮುಖಂಡರಾದ ಕೆ.ಗುರುಸ್ವಾಮಿ, ಕೆ.ರಾಜು, ಕೆ.ಎಸ್.ಆನಂದ್, ಕೆ.ಜೆ.ಆನೂಪ್, ಕೆ.ಬಿ.ರಾಮು, ಕೆ.ಸಿ.ಮಂಜುನಾಥ್, ಕಾರ್ತಿಕ್ ಮತ್ತಿತರರಿದ್ದರು