ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಇಂದು( ಜೂ.20) ಶ್ರೀಲಂಕಾಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ ಉಭಯ ರಾಷ್ಟ್ರಗಳ ದ್ವಿಪಕ್ಷೀಯ ಸಂಬಂಧವನ್ನು ಬಲಪಡಿಸುವ ಸಲುವಾಗಿ ಮಾತುಕತೆ ನಡೆಸಲಿದ್ದಾರೆ.
ಶ್ರೀಲಂಕಾ ಭೇಟಿ ಕುರಿತು ‘ಎಕ್ಸ್’ ಖಾತೆಯಲ್ಲಿ ಬರೆದುಕೊಂಡಿರುವ ಅವರು, ‘ಎರಡನೇ ಬಾರಿಗೆ ಅಧಿಕಾರ ವಹಿಸಿಕೊಂಡ ಬಳಿಕ ಶ್ರೀಲಂಕಾಕ್ಕೆ ಇದು ಮೊದಲ ಭೇಟಿ’ ಎಂದಿದ್ದಾರೆ.
ಕೊಲಂಬೊಗೆ ಆಗಮಿಸಿದ ಜೈಶಂಕರ್ ಅವರನ್ನು ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ತಾರಕ ಬಾಲಸೂರ್ಯ, ಪೂರ್ವ ಪ್ರಾಂತ್ಯದ ಗವರ್ನರ್ ಸೆಂಥಿಲ್ ಥೋಂಡಮಾನ್ ಅವರು ಬರಮಾಡಿಕೊಂಡರು.
ಉಭಯ ರಾಷ್ಟ್ರಗಳ ಸಂಪರ್ಕ ಯೋಜನೆಯನ್ನು ಬಲವರ್ಧನೆಗೊಳಿಸುವುದು ಸೇರಿದಂತೆ ಅನೇಕ ಅಭಿವೃದ್ಧಿ ಕಾರ್ಯಗಳ ಕುರಿತು ಚರ್ಚೆ ನಡೆಸಲಿದ್ದಾರೆ ಎನ್ನಲಾಗಿದೆ.
‘ಜೈಶಂಕರ್ ಅವರ ಶ್ರೀಲಂಕಾ ಪ್ರವಾಸವು ‘ನೆರೆಯವರೇ ಮೊದಲು’ ಎಂಬ ಭಾರತದ ನೀತಿಯ ಭಾಗವಾಗಿದೆ. ಉಭಯರಾಷ್ಟ್ರಗಳ ದ್ವಿಪಕ್ಷೀಯ ಬಾಂಧವ್ಯದ ಪ್ರತೀಕವಾಗಿದೆ. ಭೇಟಿಯ ವೇಳೆ ಜೈಶಂಕರ್ ಅವರು ಹಲವು ವಿಚಾರಗಳ ಕುರಿತಂತೆ ಶ್ರೀಲಂಕಾದ ಉನ್ನತ ನಾಯಕರೊಂದಿಗೆ ಚರ್ಚಿಸಲಿದ್ದಾರೆ. ಈ ಭೇಟಿಯು ಉಭಯ ರಾಷ್ಟ್ರಗಳ ಸಂಪರ್ಕ ಯೋಜನೆ ಹಾಗೂ ಸಹಕಾರ ಯೋಜನೆಗಳಿಗೆ ವೇಗ ನೀಡಲಿದೆ’ ಎಂದು ವಿದೇಶಾಂಗ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿತ್ತು