ಬೆಂಗಳೂರು (ಜೂನ್ 18):- ಬೆಂಗಳೂರು ನಗರದ ಕೋರಮಂಗಲ ಮತ್ತು ಚಲ್ಲಘಟ್ಟ ತ್ಯಾಜ್ಯ ನೀರನ್ನು ಸಂಸ್ಕರಿಸಿ ಕೋಲಾರ ಜಿಲ್ಲೆ ಮತ್ತು ಚಿಕ್ಕಬಳ್ಳಾಪುರ ತಾಲ್ಲೂಕಿನ ಒಟ್ಟು 126 ಕೆರೆಗಳನ್ನು ತುಂಬಿಸುವಂತೆ ಈ ಹಿಂದೆ ಆಗಿರುವ ಕರಾರಿನಂತೆ ಹರಿಸಬೇಕು ಎಂದು ನಗರಾಭಿವೃದ್ದಿ ಮತ್ತು ನಗರ ಯೋಜನೆ ಹಾಗೂ ಕೋಲಾರ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಬಿ. ಎಸ್ ಸುರೇಶ (ಬೈರತಿ) ಅವರು ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಬೆಂಗಳೂರಿನ ವಿಧಾನಸೌಧದ ತಮ್ಮ ಕಚೇರಿಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ|| ಎಂ.ಸಿ ಸುಧಾಕರ್ ಸೇರಿದಂತೆ ಕೋಲಾರ ಜಿಲ್ಲೆಯ ಶಾಸಕರು ಹಾಗೂ ಅಧಿಕಾರಿಗಳೊಂದಿಗೆ ಬೈರತಿ ಸುರೇಶ ರವರು ಸುಧೀರ್ಘವಾಗಿ ಸಭೆ ನಡೆಸಿ ಕೆ.ಸಿ ವ್ಯಾಲಿ ಸಂಸ್ಕರಣ ಘಟಕದಿಂದ ಕರಾರಿನಂತೆ 310 ದಶಲಕ್ಷ ಲೀಟರ್ ಅನ್ನು ಎಲ್ಲಾ 126 ಕೆರೆಗಳಿಗೆ ತುಂಬಿಸಬೇಕೆಂದು ತಾಕೀತು ಮಾಡಿದರು.
Onion Juice: ಖಾಲಿ ಹೊಟ್ಟೆಯಲ್ಲಿ ಈರುಳ್ಳಿ ರಸ ಕುಡಿಯುವುದರಿಂದ ಸಿಗುವ ಪ್ರಯೋಜನಗಳೇನು ಗೊತ್ತಾ..?
ಕಳೆದ ಕೆಲವು ತಿಂಗಳಿನಿಂದ 140 ದಶಲಕ್ಷ ಲೀಟರ್ ಅನ್ನು ಮಾತ್ರ ನೀಡಲಾಗುತ್ತಿದ್ದು, ಕೋಲಾರ ಜಿಲ್ಲೆಯಲ್ಲಿ ಕಳೆದ ಒಂದು ವರ್ಷದಿಂದ ಸತತ ಬರಗಾಲವಿದ್ದು, ಮಳೆ ಪ್ರಮಾಣ ಸಹಿತ ಕಡಿಮೆಯಾಗಿದೆ. ಇಂತಹ ಪರಿಸ್ಥಿತಿಯಲ್ಲಿ ನೇರವಾಗಿ ಕೋಲಾರ ಜಿಲ್ಲೆ ಮತ್ತು ಚಿಂತಾಮಣಿ ತಾಲ್ಲೂಕಿನ ಕೆರೆಗಳಿಗೆ ಸಂಸ್ಕರಿಸಿದ ತ್ಯಾಜ್ಯ ನೀರನ್ನು ಹೊಸಕೋಟೆ ಮತ್ತು ಆನೇಕಲ್ ಪಟ್ಟಣಗಳಿಗೆ ಬಿಡುತ್ತಿರುವುದು ಸರಿಯಾದ ಕ್ರಮವಲ್ಲ ಎಂದು ಸಣ್ಣ ನೀರಾವರಿ ಅಧಿಕಾರಿಗಳಿಗೆ ಸಚಿವರಾದ ಬೈರತಿ ಸುರೇಶ ಪ್ರಶ್ನಿಸಿದರು.
ಕೆ.ಸಿ ವ್ಯಾಲಿ ತ್ಯಾಜ್ಯ ನೀರನ್ನು ಸಂಸ್ಕರಿಸುವ ಎರಡು ಘಟಕಗಳ ಯಂತ್ರೋಪಕರಣಗಳು ಹೊಸದಿದ್ದು, ಅದರಲ್ಲಿ ಒಂದು ದುರಸ್ಥಿಯಲ್ಲಿದೇ ಎಂದು ಹೇಳುತ್ತೀರಿ ಇನ್ನೊಂದು ಯಂತ್ರದ ಮೂಲಕ ಕೋಲಾರ ಜಿಲ್ಲೆ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲ್ಲೂಕಿಗೆ ಹರಿಸುವುದನ್ನು ಬಿಟ್ಟು ಆನೇಕಲ್ ತಾಲ್ಲೂಕಿಗೆ ಏಕೆ ಹರಿಸುತ್ತಿದ್ದಿರಿ ಎಂದು ಏರು ಧ್ವನಿಯಲ್ಲಿ ಸಣ್ಣ ನೀರಾವರಿ ಇಲಾಖೆಯ ಮುಖ್ಯ ಅಭಿಯಂತರರಿಗೆ ಸಚಿವರಾದ ಬೈರತಿ ಸುರೇಶ ಮತ್ತು ಡಾ|| ಎಂ.ಸಿ ಸುಧಾಕರ್ ಪ್ರಶ್ನಿಸಿದರು.
108 ದಶಲಕ್ಷ ಲೀಟರ್ ತ್ಯಾಜ್ಯ ನೀರು ಸಂಸ್ಕರಿಸುವ ಘಟಕ ಕಾರ್ಯನಿರ್ವಹಿಸುತ್ತಿಲ್ಲ ಎಂದು ಕಾರಣ ನೀಡಿ ಅದನ್ನೇ ಆನೇಕಲ್ಗೆ ಪೂರೈಸುತ್ತಿದ್ದಿರಿ ಎಂದು ಕೋಲಾರ ಜಿಲ್ಲೆಯ ಶಾಸಕರು ಒಟ್ಟಾಗಿ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳ ಮೇಲೆ ಅರೋಪಿಸಿದಾಗ ಮಧ್ಯ ಪ್ರವೇಶಿಸಿದ ಸಚಿವರಾದ ಶ್ರೀ ಬಿ. ಎಸ್ ಸುರೇಶ ಮತ್ತು ಡಾ|| ಎಂ. ಸಿ ಸುಧಕರ್ ಅಲ್ಲಿಯೇ ಇದ್ದ ಬೆಂಗಳೂರು ಜಲಮಂಡಳಿ ಅಧ್ಯಕ್ಷರಾದ ರಾಮ್ ಮನೋಹರ್ ಪ್ರಸಾದ್ ರವರನ್ನು ಪ್ರಶ್ನಿಸಿದಾಗ ತ್ಯಾಜ್ಯ ನೀರನ್ನು ಸಂಸ್ಕರಿಸಿ ನೀರನ್ನು ಸಣ್ಣ ನೀರಾವರಿ ಇಲಾಖೆಯ ಕೆ.ಸಿ ವ್ಯಾಲಿ ಘಟಕಕ್ಕೆ ಹರಿಸುವುದಷ್ಟೆ ನಮ್ಮ ಕೆಲಸ ಯಾವ ಜಿಲ್ಲೆಗೆ ಯಾವ ತಾಲ್ಲೂಕಿಗೆ ಎಷ್ಟು ನೀರು ಬೀಡಬೇಕು ಅಥವಾ ಹರಿಸುವ ಕೆಲಸ ನಮ್ಮದಲ್ಲ ಎಂದು ಸ್ಪಷ್ಟ ಪಡಿಸಿದರು.