ಮುಳಬಾಗಿಲು :- ಕಬ್ಬಿಣದ ಕಡಲೆಯಂತಿದೆ ಎಂಬ ಗಣಿತ ವಿಷಯವನ್ನು ಮಕ್ಕಳಿಗೆ ಸುಲಭ ಮಾರ್ಗಗಳನ್ನು ಅಳವಡಿಸಿಕೊಂಡು ವಿದ್ಯಾಭ್ಯಾಸ ನೀಡುತ್ತಿರುವ ಕಾರ್ಯಕ್ರಮಕ್ಕೆ ಹೆಚ್ಚಿನ ಸಹಕಾರವನ್ನು ನೀಡಲಾಗುತ್ತದೆ ಎಂದು ಗ್ರಾ.ಪಂ ಅಧ್ಯಕ್ಷ ಅಶೋಕ್ಕುಮಾರ್ ಭರವಸೆ ನೀಡಿದರು.
ಮುಳವಾಗಿಲಿನ ಬೈರಕೂರು ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಲಾದ ಗ್ರಾ.ಪಂ ಮಟ್ಟದ 14 ಶಾಲಾ ಮಕ್ಕಳಿಗೆ ಹಮ್ಮಿಕೊಂಡ ಗಣಿತ ಕಲಿಕಾ ಆಂದೋಲನಾ ಕಾರ್ಯಕ್ರಮದಲ್ಲಿ ಗ್ರಾ.ಪಂ ವತಿಯಿಂದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಈ ಹಿಂದೆ ಗಣಿತ ವಿಷಯವನ್ನು ಕಲಿಯಬೇಕಾದರೆ ಹರಸಾಹಸವನ್ನು ಪಡಬೇಕಾಗಿತ್ತು. ಆದರೆ ಈಗ ಶಿಕ್ಷಣ ಇಲಾಖೆ ಹಲವಾರು ರೀತಿಯ ಸುಲಭವಾದ ಮಾರ್ಗಗಳನ್ನು ಪರಿಚಯಿಸಿರುವುದು ಮಕ್ಕಳಿಗೆ ತುಂಬಾ ಅನುಕೂಲವಾಗಿದೆ ಎಂದರು.
ಗಣಿತ ವಿಷಯ ಎಂದರೆ ಮಗ್ಗಿ, ಕೂಡುವುದು, ಭಾಗಿಸುವುದು, ವ್ಯವಕಲನ, ಸೂತ್ರಗಳು, ಪ್ರಮೇಯಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳುವುದು ತುಂಬಾ ಕಷ್ಟಕರವಾಗಿತ್ತು. ಆದರೆ ಈಗ ಇಂತಹ ಸಾವಿರಾರು ಅಂಕಿಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳುವ ಮಾರ್ಗೋಪಾಯಗಳನ್ನು ಕಂಡುಕೊಂಡು ಪ್ರತಿಯೊಬ್ಬ ಮಗುವಿಗೂ ಗಣಿತ ವಿಷಯ ಸುಲಭ ರೀತಿಯಲ್ಲಿ ಅರ್ಥ ಮಾಡಿಸುತ್ತಿರುವುದು ಉತ್ತಮ ರೀತಿಯಾಗಿದೆ ಎಂದು ತಿಳಿಸಿದರು.
ಗ್ರಾ.ಪಂ ಸರ್ವ ಸದಸ್ಯರ ಮಹಾ ಒಕ್ಕೂಟದ ತಾಲ್ಲೂಕು ಅಧ್ಯಕ್ಷ ಪಿ.ವಿ.ಶಂಕರ್ ಮಾತನಾಡಿ, ಪೋಷಕರು ತಮ್ಮ ಮಕ್ಕಳ ವಿದ್ಯಾಭ್ಯಾಸದ ವಿವಿಧ ವಿಷಯಗಳನ್ನು ಕಲಿಯುವಂತೆ ಹೆಚ್ಚಿನ ಒತ್ತಡವನ್ನು ಹಾಕಬೇಡಿ. ಏಕೆಂದರೆ ಒತ್ತಡದಿಂದ ಯಾವುದೇ ವಿಷಯವನ್ನು ಕಲಿತರೆ ಅದು ಹೆಚ್ಚಿನ ಕಾಲ ನೆನಪಿನಲ್ಲಿ ಇರುವುದರಿಲ್ಲ. ಇದರಿಂದ ಪರೀಕ್ಷೆಯಲ್ಲಿ ಆಯ್ದ ಉತ್ತರಗಳನ್ನು ಮಕ್ಕಳು ಬರೆಯಲು ಸಾಧ್ಯವಾಗುವುದಿಲ್ಲ. ಒತ್ತಡ ಮುಕ್ತ ಓದಿಗೆ ಮೊದಲ ಆದ್ಯತೆಯನ್ನು ನೀಡಿದಾಗ ಆ ಮಗು ಕಲಿಯಲು ಸಮಯವನ್ನು ತೆಗೆದುಕೊಂಡರೂ ಸಹ ಓದಿದ್ದನ್ನು ಹೆಚ್ಚಿನ ಕಾಲ ನೆನಪಿನಲ್ಲಿ ಇಟ್ಟುಕೊಳ್ಳಲು ಸುಲಭವಾಗುತ್ತದೆ ಎಂದು ಕಿವಿ ಮಾತು ಹೇಳಿದರು.
ಗ್ರಾ.ಪಂ ಪಿಡಿಒ ಚಂದ್ರಶೇಖರ್, ಸಿ.ಆರ್.ಪಿ ವರದರಾಜು, ಶಿಕ್ಷಕರಾದ ನಾಗರಾಜ್, ಸರೋಜಮ್ಮ ಸೇರಿದಂತೆ 14 ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.