ಕೋಲಾರ: ನಗರದ ಕೀಲುಕೋಟೆಯಲ್ಲಿ ಶ್ರೀ ಬೀರೇಶ್ವರ ದೊಡ್ಡ ದ್ಯಾವರ ಜಾತ್ರಾ ಮಹೋತ್ಸವವು ಮಾ.21, 22 ಹಾಗೂ 23ರಂದು ಮೂರು ದಿನಗಳ ಕಾಲ ಶ್ರದ್ಧಾ ಭಕ್ತಿಗಳಿಂದ ನಡೆಯಲಿದ್ದು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಶ್ರೀ ಬೀರೇಶ್ವರ, ಭತ್ತೇಶ್ವರ, ಸಿದ್ದೇಶ್ವರ ಚಾರಿಟಬಲ್ ಟ್ರಸ್ಟ್’ನ ಪ್ರಧಾನ ಕಾರ್ಯದರ್ಶಿ ಎನ್.ನಾರಾಯಣಸ್ವಾಮಿ ಕೋರಿದರು. ನಗರದ ಪತ್ರಕರ್ತರ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾ.21, 22 ಹಾಗೂ 23ರಂದು ಬೀರೇಶ್ವರ ಜಾತ್ರಾ ಮಹೋತ್ಸವ ನಡೆಯಲಿದೆ. ಸುಮಾರು 9 ವರ್ಷಗಳಲ್ಲಿ ನಡೆಯುತ್ತಿರುವ ಜಾತ್ರೆ ಇದಾಗಿದೆ. ಕುರುಬ ಸಮುದಾಯದ ಹಾಲುಮತಸ್ಥ ಕುಟುಂಬಸ್ಥರು ಸೇರಿ ಭಕ್ತಿಭಾವದಿಂದ ದೊಡ್ಡ ದ್ಯಾವರ ನಡೆಸಲಾಗುತ್ತದೆ ಎಂದು ಹೇಳಿದ್ರು.
ಶ್ರೀ ಗುರು ಸಿದ್ದಲಿಂಗ ಆರಾಧ್ಯ ಸ್ವಾಮೀಜಿಗಳ ನೇತೃತ್ವದಲ್ಲಿ ನಡೆಯುವ ಜಾತ್ರಾ ಮಹೋತ್ಸವದಲ್ಲಿ ಮಾ.21 ಗುರುವಾರ ನೂತನವಾಗಿ ನಿರ್ಮಿಸಿರುವ 21 ವೀರಗಾರರ ಗುಡಿ ಹಾಗೂ ಕಾಡು ಸಿದ್ದೇಶ್ವರ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ನರೆವೆರಲಿದೆ. ಮೂಲ ದೇವರಿಗೆ ವಿಶೇಷ ಪೂಜೆ, ಹೂವಿನ ಅಲಂಕಾರ, ಸಂಜೆ ರಸಮಂಜರಿ ಕಾರ್ಯಕ್ರಮ. ಮಾ.22 ಶುಕ್ರವಾರ ಅಂತರಗಂಗೆ ಬೆಟ್ಟದಲ್ಲಿ ದೇವರುಗಳ ಹೊಳೆಯಾಡುವುದು, ವೀರಕುಮಾರರ ತಲೆಯ ಮೇಲೆ ತೆಂಗಿನಕಾಯಿ ಪವಾಡ, ವೀರಗಾಸೆ, ಡೋಳ್ಳುಕುಣಿತ, ಕಾಲಾಟಗಾರರಿಂದ ದೇವರ ಕಥೆ. ಸಂಜೆ 6ರ ನಂತರ ದೀಪಾರಾಧನೆ ಮತ್ತು ದೀಪಾ ತೆಗೆದುಕೊಳ್ಳುವ ಕಾರ್ಯಕ್ರಮ ನಡೆಯುತ್ತದೆ. ಶನಿವಾರ ಮಾ.23 ಕುಲಬಾಂಧವರಿಗೆ ಬೀಳ್ಕೊಡುಗೆ ನೀಡುವ ಮೂಲಕ ಜಾತ್ರಾ ಮಹೋತ್ಸವ ಮುಕ್ತಾಯಗೊಳ್ಳಲಿದೆ ಎಂದು ವಿವರಿಸಿದರು.
ನಗರದ ಕೀಲುಕೋಟೆಯಲ್ಲಿ ಅನಾದಿಕಾಲದಿಂದಲೂ ನೆಲೆಗೊಂಡಿರುವ ಶ್ರೀ ಬೀರೇಶ್ವರ ದೇವಸ್ಥಾನದಲ್ಲಿ 5 ವರ್ಷಕ್ಕೊಮ್ಮೆ ದ್ಯಾವರ ಜಾತ್ರೆಯು ನೆರವೇರಿಸಲಾಗುತ್ತಿದೆ. 2015 ರ ನಂತರ 2020ಕ್ಕೆ ನಡೆಯಬೇಕಿದ್ದ ದ್ಯಾವರ ಕೊರೊನ ಸಲುವಾಗಿ ಮುಂದೂಡಿ, ಈ ವರ್ಷ ಅದ್ದೂರಿಯಾಗಿ ನಡೆಸಲಾಗುತ್ತಿದೆ. ಲೋಕಸಭೆ ಚುನಾವಣೆ ನೀತಿ ಸಂಹಿತೆ ಜಾರಿ ಸಲುವಾಗಿ ಯಾವುದೇ ರಾಜಕೀಯ ಪ್ರೇರಿತ ಚಟುವಟಿಕೆಗಳು ನಡೆಯುತ್ತಿಲ್ಲ. ಧಾರ್ಮಿಕ ಕಾರ್ಯಕ್ರಮ ಮಾತ್ರ ನಡೆಸಲಾಗುತ್ತಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಶ್ರೀ ಬೀರೇಶ್ವರ, ಭತ್ತೇಶ್ವರ, ಸಿದ್ದೇಶ್ವರ ಚಾರಿಟಬಲ್ ಟ್ರಸ್ಟ್’ನ ಅಧ್ಯಕ್ಷ ಎಸ್.ವೆಂಕಟರಮಣಪ್ಪ, ಖಜಾಂಚಿ ಎನ್.ಸೋಮಶೇಖರ್, ಸದಸ್ಯರಾದ ಕೀಲುಕೋಟೆ ಸಿದ್ದಪ್ಪ, ಹುಳದೇನಹಳ್ಳಿ ಎಚ್.ಆರ್.ನಾಗರಾಜು, ಕೀಲುಕೋಟೆ ಕೆ.ಎನ್.ಶಿವಣ್ಣ, ಪೂಜಾರಿ ಕಲ್ಲೇಶಪ್ಪ ಹಾಜರಿದ್ದರು.