ಹಾಸನ: ತಾಳಿ ಕಟ್ಟುವ ವೇಳೆ ಮದುವೆ ಮಂಟಪಕ್ಕೆ ಮತ್ತೋರ್ವ ಯುವಕನ ಎಂಟ್ರಿಯಿಂದ ಮದುವೆ ಮುರಿದು ಬಿದ್ದಿರುವ ಘಟನೆ ಹಾಸನ ಜಿಲ್ಲೆ ಬೇಲೂರು ಪಟ್ಟಣದಲ್ಲಿ ನಡೆದಿದೆ. ಇಂದು ಬೇಲೂರಿನ ಒಕ್ಕಲಿಗ ಸಮುದಾಯ ಭವನದಲ್ಲಿ ನಡೆಯಬೇಕಿದ್ದ ಮದುವೆಯಾಗಿದ್ದು, ಆದರೆ ತಾಳಿ ಕಟ್ಟುವ ವೇಳೆ ಕಲ್ಯಾಣಮಂಟಪಕ್ಕೆ ಬಂದ ನವೀನ್ ಎಂಬಾತನಿಂದ ಮದುವೆಗೆ ಅಡ್ಡಿ ಆರೋಪ ಮಾಡಲಾಗಿದೆ.
ತಾಳಿ ಕಿತ್ತುಕೊಂಡು ತೇಜಸ್ವಿನಿ ನನ್ನನ್ನು ಪ್ರೀತಿಸುತ್ತಿದ್ದಾಳೆ. ನನ್ನ ಜೊತೆ ಮದುವೆ ಮಾಡಿ ಎಂದು ಪಟ್ಟುಹಿಡಿದಿದ್ದಾನೆ. ಹೀಗಾಗಿ ಕಲ್ಯಾಣಮಂಟಪದಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಮಧ್ಯಪ್ರವೇಶಿಸಿದ ಬೇಲೂರು ಪೊಲೀಸರು ಯುವಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ತೇಜಸ್ವಿನಿ ತನ್ನನ್ನ ಪ್ರೀತಿಸುತ್ತಿದ್ದಳು. ತನಗೆ ವಿಚಾರ ಮುಚ್ಚಿಟ್ಟು ಮದುವೆ ಮಾಡಿಕೊಳ್ಳಲಾಗುತ್ತಿದೆ ಎಂದು ಯುವಕ ಆರೋಪಿಸಿದ್ದಾನೆ. ಇತ್ತ ಪ್ರೀತಿ ವಿಚಾರ ತಿಳಿದ ಮದುಮಗ ಮದುವೆ ಬೇಡ ಎಂದು ಹೊರಟು ಹೋಗಿದ್ದಾನೆ. ಬೇಲೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.