ಮುಂಬೈ: ಅಭಿಮಾನಿಯೊಬ್ಬರು ಸೆಲ್ಫಿ ತೆಗೆದುಕೊಳ್ಳಲು ಬಂದ ವೇಳೆ ಅವರಿಗೆ ಲಿಪ್ ಲಾಕ್ ಮಾಡಿ ಸುದ್ದಿಯಾ§ಗಿದ್ದ ಖ್ಯಾತ ಗಾಯಕ ಉದಿತ್ ನಾರಾಯಣ್ ತಾವು ಮಾಡಿದ ಲಿಪ್ ಕಿಸ್ ಘಟನೆಯನ್ನು ಸಮರ್ಥಿಸಿಕೊಂಡಿದ್ದಾರೆ. ಸಂಗೀತ ಕಛೇರಿಯಲ್ಲಿ ತಮ್ಮ ಮಹಿಳಾ ಅಭಿಮಾನಿಯೊಬ್ಬರಿಗೆ ಲಿಪ್ ಕಿಸ್ ಮಾಡಿದ್ದ ಉದಿತ್ ಅದರ ಕುರಿತು ನನಗೆ ಯಾವುದೇ ವಿಷಾದವಿಲ್ಲ. ಸುಮ್ಮನೆ ವಿವಾದದ ಕಿಡಿ ಹಚ್ಚಿದ್ದಾರೆ. ಮುಂದೊಂದು ದಿನ ನಾನೂ ಲತಾಜಿಯಂತೆ ಭಾರತ ರತ್ನ ಪಡೆಯುತ್ತೇನೆ ಎಂದು ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
ಫೆ.೨ರಂದು ಗಾಯಕ ಉದಿತ್ ನಾರಾಯಣ್ ತಮ್ಮ ಸಂಗೀತ ಕಾರ್ಯಕ್ರಮದಲ್ಲಿ ಮಹಿಳಾ ಅಭಿಮಾನಿಯೊಬ್ಬರನ್ನು ಚುಂಬಿಸಿದ ಕಾರಣಕ್ಕೆ ಭಾರೀ ಟೀಕೆಗೆ ಗುರಿಯಾದರು. ಸಂಗೀತ ಕಛೇರಿಯ ವಿಡಿಯೊ ವೈರಲ್ ಆಗುತ್ತಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಉದಿತ್ ವಿರುದ್ಧ ಗರಂ ಆಗಿದ್ದರು. ಅಭಿಮಾನಿಯೊಬ್ಬಳು ಸೆಲ್ಫಿಗಾಗಿ ಹತ್ತಿರಕ್ಕೆ ಬಂದಾಗ ಗಾಯಕ ಆಕೆಯ ತುಟಿಗೆ ಮುತ್ತಿಟ್ಟಿರುವ ದೃಶ್ಯ ವಿಡಿಯೋ ಇದಾಗಿತ್ತು. ಇದೀಗ ಸಂದರ್ಶನವೊಂದರಲ್ಲಿ ಮಾತನಾಡಿರುವ ಉದಿತ್ ಆ ಕುರಿತು ನನಗೆ ಯಾವುದೇ ವಿಷಾದವಿಲ್ಲ. ಭವಿಷ್ಯದಲ್ಲಿ ಲತಾ ಮಂಗೇಶ್ಕರ್ ಅವರಂತೆ ಭಾರತ ರತ್ನವನ್ನು ಸ್ವೀಕರಿಸುತ್ತೇನೆ ಎಂದಿದ್ದಾರೆ.
“ಈ ವಿವಾದಗಳಿಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ನನ್ನ ಅಭಿಮಾನಿಗಳಿಗೆ ನನ್ನ ಬಗ್ಗೆ ಗೊತ್ತಿದೆ. ನಾನು ಹಲವಾರು ಫಿಲ್ಮ್ಫೇರ್ ಪ್ರಶಸ್ತಿ, ರಾಷ್ಟ್ರೀಯ ಪ್ರಶಸ್ತಿ, ಪದ್ಮಶ್ರೀ ಮತ್ತು ಪದ್ಮಭೂಷಣ ಪ್ರಶಸ್ತಿಗೆ ಭಾಜನನಾಗಿದ್ದೇನೆ. ನಾನು ಲತಾಜಿಯವರಂತೆ ಭಾರತ ರತ್ನವನ್ನು ಪಡೆಯಲು ಹಾತೊರೆಯುತ್ತಿದ್ದೇನೆ. ಅವರು ನನ್ನ ಆರಾಧ್ಯ ದೈವ. ನಾನು ಅವರಿಗೆ ಪ್ರೀತಿಪಾತ್ರನಾಗಿದ್ದೆ” ಎಂದು ಸಂದರ್ಶನದಲ್ಲಿ ಹೇಳಿದ್ದಾರೆ.