ವಯೋಸಹಜ ಕಾಯಿಲೆಯಿಂದ ಶುಕ್ರವಾರ ಹಿರಿಯ ನಟಿ ಲೀಲಾವತಿ ಅವರು ಕೊನೆಯುಸಿರೆಳೆದರು. ಸ್ಯಾಂಡಲ್ವುಡ್ಗೆ ಈ ಸಾವು ತುಂಬಲಾರದ ನಷ್ಟ ಉಂಟುಮಾಡಿದ್ದು, ಅವರ ಅಗಲಿಕೆಗೆ ಸಿನಿಮಾ ಮತ್ತು ರಾಜಕೀಯ ಕ್ಷೇತ್ರದ ಗಣ್ಯರು ಸೇರಿದಂತೆ ಸಹಸ್ರಾರು ಸಂಖ್ಯೆಯ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.
ಇಂದು ಬೆಳಗ್ಗೆ 5:30ರಿಂದಲೇ ನೆಲಮಂಗಲದಲ್ಲಿರುವ ಅಂಬೇಡ್ಕರ್ ಮೈದಾನದಲ್ಲಿ ಲೀಲಮ್ಮನ ಪಾರ್ಥಿವ ಶರೀರ ಇರಿಸಲಾಗಿದ್ದು, ಸಾರ್ವಜನಿಕರ ದರ್ಶನಕ್ಕೆ ಮೂಲ ವ್ಯವಸ್ಥೆ ಮಾಡಲಾಗಿದೆ. ಸ್ಥಳಕ್ಕೆ ಅಪಾರ ಸಂಖ್ಯೆಯಲ್ಲಿ ಜನರು ಆಗಮಿಸಿ, ಲೀಲಾವತಿ ಅವರಿಗೆ ಕೈಮುಗಿದು ತೆರಳುತ್ತಿದ್ದಾರೆ.
ಇದಾದ ಬಳಿಕ ಬೆಳಗ್ಗೆ 10:45ರಿಂದ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುವುದು. 11 ಗಂಟೆಗೆ ಸಿಎಂ ಸಿದ್ದರಾಮಯ್ಯ ಅವರು ಭೇಟಿ ಕೊಡಲಿದ್ದು, ಅಂತಿಮ ನಮನ ಸಲ್ಲಿಸಲಿದ್ದಾರೆ. ಮಧ್ಯಾಹ್ನ 2:15ರ ನಂತರ ಲೀಲಾವತಿ ಪಾರ್ಥಿವ ಶರೀರ ಸ್ಥಳಾಂತರಗೊಳ್ಳಲಿದ್ದು, ನೆಲಮಂಗಲದ ತೋಟದ ಮನೆಗೆ ತರಲಾಗುವುದು.
ಇಂದು ಮಧ್ಯಾಹ್ನ 3:30ರ ನಂತರ ಅಂತ್ಯಕ್ರಿಯೆ ವಿಧಿವಿಧಾನವು ಬಂಟರ ಸಂಪ್ರದಾಯದಂತೆ ನೆರವೇರಲಿದೆ. ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಯಲಿದೆ.