ಬೆಂಗಳೂರು: ಪೆಟ್ರೋಲ್ ಡೀಸೆಲ್ ದರ ಹೆಚ್ಚಳ ಮಾಡಲಾಗಿದೆ ಎಂದು ಬಿಜೆಪಿಯವರು ಪ್ರತಿಭಟನೆ ಮಾಡುತ್ತಿದ್ದಾರೆ. ಹಾಗಾದರೆ ಅವರ ಪಕ್ಷ ಆಡಳಿತ ನಡೆಸುತ್ತಿರುವ ರಾಜ್ಯಗಳಲ್ಲಿ ದರ ಎಷ್ಟಿದೆ? ಎಂದು ಸಚಿವ ಪ್ರಿಯಾಂಕ್ ಖರ್ಗೆ ಬಿಜೆಪಿಗರಿಗೆ ತಿರುಗೇಟು ನೀಡಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತೈಲ ಬೆಲೆ ಖಂಡಿಸಿ ಬಿಜೆಪಿ ಪ್ರತಿಭಟನೆ ಮಾಡಲಿ. ಅವರಿಗೆ ಪ್ರತಿಭಟಿಸುವ ಹಕ್ಕಿದೆ.
ಜನರ ಸವಾಲುಗಳಿಗೆ ಉತ್ತರ ಕೊಡುವವರು ಯಾರು? ಪೆಟ್ರೋಲ್ ದರವನ್ನು 97ರೂ. ವರೆಗೆ ತಂದವರು ಯಾರು? ಸೆಸ್ಗಳ ಅನುಕೂಲ ಮಾಡಿಕೊಟ್ಟಿದ್ದಾರೆ. ರಷ್ಯಾದಿಂದ ಕಡಿಮೆ ಬೆಲೆಗೆ ತೆಗೆದುಕೊಂಡು ಅದನ್ನು ಜನ ಸಾಮಾನ್ಯರಿಗೆ ಕೊಟ್ಟಿದ್ದೀರಾ? ನಾವು ಕೇವಲ 3ರೂ. ಏರಿಕೆ ಮಾಡಿದ್ದೇವೆ ಅಷ್ಟೇ ಎಂದು ಅವರು ಸರ್ಕಾರದ ಬೆಲೆ ಏರಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಮಹಾರಾಷ್ಟ್ರ, ಆಂದ್ರದಲ್ಲಿ ಎಷ್ಟಿದೆ? ಬಿಜೆಪಿ ಇರುವ ರಾಜ್ಯಗಳಲ್ಲಿ ತೈಲ ಬೆಲೆ ಎಷ್ಟಾಗಿದೆ? ಇವರು ಬೆಲೆ ಏರಿಕೆ ಮಾಡಿದಾಗ ದೇಶ ಕಟ್ಟುವ ಅವಶ್ಯಕತೆ ಇದೆ ಅಂತಾರೆ. ನಾವು ಮಾಡಿದ್ರೆ ದೇಶ ಹಾಳಾಗುತ್ತಾ? ಅಂಕಿ ಅಂಶಗಳನ್ನು ಜನರ ಮುಂದೆ ಇಡುತ್ತೇವೆ. ಆಗ ಎಲ್ಲಾ ವಿಚಾರ ತಿಳಿಯಲಿದೆ ಎಂದು ಅವರು ಕಿಡಿಕಾರಿದ್ದಾರೆ.