ಬೆಂಗಳೂರು:– ಬಿಜೆಪಿ ನಾಯಕರು ಯತ್ನಾಳ್ ಮಾಡಿರುವ ಆರೋಪಗಳಿಗೆ ಉತ್ತರಿಸಲಿ ಎಂದು ಸಿಎಂ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
ಬಿ.ಎಸ್. ಯಡಿಯೂರಪ್ಪನವರು ಹೈಕಮಾಂಡ್ಗೆ ಎರಡು ಸಾವಿರ ಕೋಟಿ ರೂಪಾಯಿ ಕಾಣಿಕೆ ನೀಡಿ ಮುಖ್ಯಮಂತ್ರಿಯಾಗಿದ್ದಾರೆ ಎಂದು ಹಿಂದೆ ಆರೋಪಿಸಿದ್ದ ಬಸವನಗೌಡ ಪಾಟೀಲ್ ಯತ್ನಾಳ್, ನಿನ್ನೆ ಹೊಸ ಬಾಂಬು ಸಿಡಿಸಿದ್ದಾರೆ. ಕೇಂದ್ರದ ಬಿಜೆಪಿ ನಾಯಕರನ್ನು ಯಡಿಯೂರಪ್ಪ ಬ್ಲಾಕ್ ಮೇಲ್ ಮಾಡಿ ತಮ್ಮ ಮಗನನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಏನಿದು ಬ್ಲಾಕ್ ಮೇಲ್?. ಈ ಬಗ್ಗೆ ಯಡಿಯೂರಪ್ಪ ಇಂದಿನ ಸಾರ್ವಜನಿಕ ಸಭೆಯಲ್ಲಿ ವಿವರ ನೀಡಲಿ” ಎಂದು ಒತ್ತಾಯಿಸಿದ್ದಾರೆ.
ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಬಿಜೆಪಿ ನಾಯಕ ವಿ.ಸೋಮಣ್ಣ ಅವರನ್ನು ಮೈಸೂರಿನ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸುವಂತೆ ಮಾಡಿ ಸೋಲಿಸಿದ್ದಾರೆ ಎಂದು ಇಲ್ಲಿಯ ವರೆಗೆ ಆರೋಪಿಸುತ್ತಾ ಬಂದಿರುವ ಯತ್ನಾಳ್ ಅವರು, ಈಗ ಬಸವರಾಜ ಬೊಮ್ಮಾಯಿ ಅವರನ್ನೂ ಸೋಲಿಸಲು ಬಿ ವೈ ವಿಜಯೇಂದ್ರ ಹಣ ಕೊಟ್ಟು ಕಳಿಸಿದ್ದರು ಎಂದು ಗುರುತರವಾದ ಇನ್ನೊಂದು ಆರೋಪ ಮಾಡಿದ್ದಾರೆ. ಈ ಬಗ್ಗೆ ಆತ್ಮವಿಶ್ವಾಸದಿಂದ ಮಾತನಾಡಿರುವ ಯತ್ನಾಳ್, ಬೊಮ್ಮಾಯಿ ಅವರನ್ನು ದೇವರ ಮೇಲೆ ಆಣೆಗೆ ಕರೆದಿದ್ದನ್ನು ನೋಡಿದರೆ ಆರೋಪದಲ್ಲಿ ಸತ್ಯಾಂಶ ಇದ್ದ ಹಾಗಿದೆ. ಚುನಾವಣೆಯ ಕಾಲದಲ್ಲಿ ಈ ರೀತಿಯ ಹಣ ಸಂದಾಯ ಮಾಡುವುದು ಕಾನೂನಿನ ದೃಷ್ಟಿಯಿಂದಲೂ ಶಿಕ್ಷಾರ್ಹ ಅಪರಾಧವಾಗಿದೆ” ಎಂದು ಹೇಳಿದ್ದಾರೆ.