ಬೆಂಗಳೂರು:– ಕೇಂದ್ರದ ಗೂಬೆ ಕೂರಿಸುವ ಕೆಲಸವನ್ನು ಸಿದ್ದರಾಮಯ್ಯ ನಿಲ್ಲಿಸಲಿ ಎಂದು ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ರಾಜ್ಯದಲ್ಲಿ ಈಗ ರೈತವಿರೋಧಿ ಮತ್ತು ಜನ ವಿರೋಧಿ ಸರ್ಕಾರ ಅಧಿಕಾರದಲ್ಲಿದೆ. ಅಧಿಕಾರಕ್ಕೆ ಬಂದು 9 ತಿಂಗಳು ಕಳೆದರೂ ಒಂದು ಚಿಕ್ಕ ಅಭಿವೃದ್ಧಿ ಕಾಮಗಾರಿಯನ್ನೂ ಸರ್ಕಾರ ಕೈಗೆತ್ತಿಕೊಂಡಿಲ್ಲ. ಬರದಿಂದ ಕಂಗಾಲಾಗಿರುವ ರೈತರಿಗೆ ಪರಿಹಾರ ರೂಪದಲ್ಲಿ ಒಂದು ನಯಾ ಪೈಸೆಯನ್ನೂ ಇದುವರೆಗೆ ಕೊಟ್ಟಿಲ್ಲ. ಆರ್ಥಿಕ ಸದೃಢವಾಗಿದ್ದ ರಾಜ್ಯವನ್ನು ದೈನೇಸಿ ಸ್ಥಿತಿಗೆ ತಂದು ಅದನ್ನು ಮುಚ್ಚಿಹಾಕಲು ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುವ ಕೆಲಸವನ್ನು ಸಿದ್ದರಾಮಯ್ಯ ಮಾಡುತ್ತಿದ್ದಾರೆ ಎಂದು ಬೊಮ್ಮಾಯಿ ಹೇಳಿದರು. 14ನೇ ಹಣಕಾಸು ವರ್ಷಕ್ಕಿಂತ 15 ನೇ ಹಣಕಾಸು ವರ್ಷದಲ್ಲಿ ರಾಜ್ಯಕ್ಕೆ ಕಡಿಮೆ ಸಿಕ್ಕಿದೆ ಅಂತ ಸಿದ್ದರಾಮಯ್ಯ ಹೇಳುತ್ತಿದ್ದಾರೆ. ಆದರೆ ಅವರು ಅರ್ಥಮಾಡಿಕೊಳ್ಳಬೇಕಿರುವ ಅಂಶವೆಂದರೆ, ಹಣಕಾಸು ಅಯೋಗ ಒಂದು ಸ್ವಾಯತ್ತ ಸಂಸ್ಥೆ ಎಂದು ಬೊಮ್ಮಾಯಿ ಹೇಳಿದರು.