ಕುಂದಾಪುರ: ಕಲೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ಬೈಂದೂರಿನಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಸುರಭಿ ರಿ. ಬೈಂದೂರು ಸಂಸ್ಥೆಯ ಕುಂದಾಪ್ರ ಕನ್ನಡ ಭಾಷೆಯ ನಾಟಕ ʼಮಕ್ಕಳ ರಾಮಾಯಣʼ ಬೆಂಗಳೂರಿನಲ್ಲಿ ಪ್ರಥಮ ಭಾರಿಗೆ ಜೂನ್ 9 ಹಾಗೂ 10ರಂದು ಪ್ರದರ್ಶನಗೊಳ್ಳಲಿದೆ. ಬಿ.ಆರ್. ವೆಂಕಟರಮಣ ಐತಾಳ್ ಅವರ ರಚಿಸಿರುವ ನಾಟಕವನ್ನು, ಗಣೇಶ್ ಮಂದರ್ತಿ ಕುಂದಾಪುರ ಕನ್ನಡಕ್ಕೆ ಅನುವಾದಿಸಿ ನಿರ್ದೇಶನ ಮಾಡಿದ್ದಾರೆ.
ಸುರಭಿ ಬೈಂದೂರು ಸಂಸ್ಥೆಯ ಬಾಲ ಕಲಾವಿದರು ನಾಟಕದಲ್ಲಿ ಅಭಿನಯಿಸಿದ್ದಾರೆ. ಈಗಾಗಲೇ ಹಲವು ಪ್ರದರ್ಶನಗಳನ್ನು ಕಂಡಿರುವ ಕುಂದಾಪುರ ಕನ್ನಡದ ಈ ನಾಟಕ ರಂಗಾಸಕ್ತರ ಮೆಚ್ಚುಗೆಗೂ ಪಾತ್ರವಾಗಿದೆ. ರಂಗಾಸ್ಥೆ ರಿ. ಬೆಂಗಳೂರು ನೇತೃತ್ವದಲ್ಲಿ ನಾಗರಬಾವಿಯ ಕಲಾಗ್ರಾಮದಲ್ಲಿ ಜೂನ್ 9 ಹಾಗೂ 10ರ ಸಂಜೆ 7:30ಕ್ಕೆ ನಾಟಕ ಪ್ರದರ್ಶನವಿರಲಿದೆ. ಟಿಕೆಟ್ ದರ ರೂ.200 ನಿಗದಿಪಡಿಲಾಗಿದ್ದು, ಬುಕ್ ಮೈ ಶೋ ಮೂಲಕ ಆನ್ಲೈನ್ನಲ್ಲಿ ಅಥವಾ ಸಂಘಟಕರನ್ನು ಸಂಪರ್ಕಿಸಿ ಟಿಕೆಟ್ ಬುಕ್ ಮಾಡಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ 8310775855 ಸಂಪರ್ಕಿಸಬಹುದಾಗಿದೆ. ಸುರಭಿ ಸಂಸ್ಥೆಯು ಸಂಗೀತ, ಭರತನಾಟ್ಯ, ಯಕ್ಷಗಾನ,
![Demo](https://ainlivenews.com/wp-content/uploads/2023/12/spoorthi-1.jpg)
ಚಂಡೆ, ಜಾದೂ, ನಾಟಕ, ಚಿತ್ರಕಲೆ ಮೊದಲಾದ ಕಲೆ ಹಾಗೂ ಸಾಂಸ್ಕೃತಿಕ ಪ್ರಕಾರಗಳನ್ನು ಕಳೆದ 24 ವರ್ಷಗಳಿಂದ ಬೈಂದೂರು ಪರಿಸರದ ವಿದ್ಯಾರ್ಥಿಗಳಿಗೆ ಕಲಿಸುತ್ತಿದೆ. ಪ್ರತಿವರ್ಷ ಸುರಭಿ ಜೈಸಿರಿ ಕಾರ್ಯ ಕ್ರಮದ ಮೂಲಕ ವಿಶಿಷ್ಟ ಸಾಧಕರಿಗೆ ಬಿಂದುಶ್ರೀ ಪ್ರಶಸ್ತಿ, ಸಾಧಕರಿಗೆ ಗೌರವಾರ್ಪಣೆ, ನಾಟ ಕೋತ್ಸವ, ಬೇಸಿಗೆ ಶಿಬಿರ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದೆ. ರಂಗ ಸುರಭಿ ಹಿರಿಯ ಕಲಾವಿದರ ತಂಡವು ದೆಹಲಿ, ಮುಂಬೈ, ಮೈಸೂರು, ಹಂಪಿ, ಬೆಂಗಳೂರು ಸೇರಿದಂತೆ ಹಲವೆಡೆ ಪ್ರದರ್ಶನವನ್ನು ನೀಡಿದೆ.
![](https://ainlivenews.com/wp-content/uploads/2024/01/Ad-Banner-copy-scaled.jpg)