ಮಂಡ್ಯ :- ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳ ಪೈಕಿ ಎಲ್ಲಿಯೇ ಚುನಾವಣೆಗೆ ನಿಂತರೂ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿಯವರು ಗೆಲ್ಲುವುದು ನಿಶ್ಚಿತ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು. ಮಂಡ್ಯ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರು ನಾಮಪತ್ರ ಸಲ್ಲಿಕೆ ವೇಳೆ ಭಾಗವಹಿಸಿ ಬಳಿಕ ಆಯೋಜಿಸಲಾಗಿದ್ದ ಬಿಜೆಪಿ- ಜೆಡಿಎಸ್ ಬೃಹತ್ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು,ಹಣ, ಹೆಂಡ ಮತ್ತು ತೋಳ್ಬಲದಿಂದ ಅಧಿಕಾರ ಪಡೆಯುತ್ತೇವೆ ಎಂಬ ಭ್ರಮೆಯಲ್ಲಿರುವ ಕಾಂಗ್ರೆಸ್ ಪಕ್ಷಕ್ಕೆ ಪಾಠ ಕಲಿಸಬೇಕಿದೆ. ಮಂಡ್ಯದಲ್ಲಿ ಕುಮಾರಣ್ಣ ಮತ್ತು ಬೆಂ. ಗ್ರಾಮಾಂತರದಲ್ಲಿ ಡಾ. ಮಂಜುನಾಥ್ 2 ಲಕ್ಷಕ್ಕೂ ಅಧಿಕ ಮತಗಳ ಅಂತರದಲ್ಲಿ ಗೆಲುವು ಸಾಧಿಸುವುದು ಖಚಿತ ಎಂದರು.
ಜನರ ಅಪೇಕ್ಷೆಯ ಮೇರೆಗೆ ಕುಮಾರಸ್ವಾಮಿಯವರು ಮಂಡ್ಯದಿಂದ ಸ್ಪರ್ಧಿಸುತ್ತಿದ್ದಾರೆ. ಇಲ್ಲಿ ಸೇರಿರುವ 70-80 ಸಾವಿರ ಜನರು ತಮ್ಮ ಕುಟುಂಬದ ಸದಸ್ಯರೊಡನೆ ಮತ ಹಾಕಿದರೆ ಸಾಕು. ಎಚ್ಡಿಕೆಯವರು ಅಭೂತಪೂರ್ವ ಬಹುಮತ ಪಡೆದು ಜಯಗಳಿಸಲಿದ್ದಾರೆ ಎಂದು ಭವಿಷ್ಯ ನುಡಿದರು. ಕುಮಾರಸ್ವಾಮಿ ಹಾಗೂ ಡಾ. ಸಿ.ಎನ್.ಮಂಜುನಾಥ್ ಅವರು ಸ್ಪರ್ಧಿಸುತ್ತಿರುವ ಕ್ಷೇತ್ರಗಳೂ ಸೇರಿದಂತೆ ಬಿಜೆಪಿ 28 ಕ್ಕೆ 28 ಕ್ಷೇತ್ರಗಳಲ್ಲಿಯೂ ಸಹ ಜಯ ಸಾಧಿಸಲಿದೆ ಎಂದು ನುಡಿದ ಬಿಎಸ್ವೈ, ಇದನ್ನು ತಡೆಯಲು ಯಾವ ಶಕ್ತಿಯಿಂದಲೂ ಸಾಧ್ಯವಿಲ್ಲ ಎಂದರು.
ಬಿಜೆಪಿ ಸರ್ಕಾರ ಆಡಳಿತದಲ್ಲಿದ್ದಾಗ ರೈತರಿಗೆ ನೀಡಲಾಗುತ್ತಿದ್ದ ಕಿಸಾನ್ ಸಮ್ಮಾನ್ ಯೋಜನೆಯನ್ನು ಕಾಂಗ್ರೆಸ್ ನಿಲ್ಲಿಸಿದೆ. ಹೆಣ್ಣುಮಕ್ಕಳಿಗಾಗಿ ಜಾರಿಗೊಳಿಸಲಾಗಿದ್ದ ಭಾಗ್ಯಲಕ್ಷ್ಮಿ ಬಾಂಡ್ ಯೋಜನೆಯನ್ನೂ ಸಹ ಸ್ಥಗಿತಗೊಳಿಸಿದೆ. ದೇಶದ ಉದ್ದಗಲಕ್ಕೂ ಸಹ ಮೋದಿ ಮೋದಿ ಎಂಬ ಗಾಳಿ ಬೀಸುತ್ತಿದೆ. ಮಾಜಿ ಪ್ರಧಾನಿ ದೇವೇಗೌಡರು ನಮ್ಮೊಡನೆ ಕೈ ಜೋಡಿಸಿದ್ದಾರೆ. ಈ ವಯಸಿನಲ್ಲಿ ದೇವೇಗೌಡರು ತೋರುತ್ತಿರುವ ಉತ್ಸಾಹ ಅನನ್ಯ ಎಂದರು.
ಗೋವಾ ಸಿಎಂ ಪ್ರಮೋದ್ ಸಾವಂತ್ ಮಾತನಾಡಿ, ಬಿಜೆಪಿ ಸರ್ಕಾರವು ನಾಲ್ಕು ಸ್ತಂಭಗಳ ಮೇಲೆ ಆಡಳಿತ ನಡೆಸುತ್ತಿದೆ. ನಾರಿ ಶಕ್ತಿ, ರೈತ ಶಕ್ತಿ, ಯುವ ಶಕ್ತಿ ಹಾಗೂ ಬಡವರ ಕಲ್ಯಾಣ ಎಂಬುದೇ ಈ ನಾಲ್ಕು ಸ್ತಂಭಗಳಾಗಿವೆ .ಆದರೆ ಕಾಂಗ್ರೆಸ್ ಸರ್ಕಾರವು ಕೇವಲ ಜಾತಿ, ಧರ್ಮಗಳ ಆಧಾರದ ಮೇಲೆ ನಾಡನ್ನು ಒಡೆಯಲು ಯತ್ನಿಸುತ್ತಿದೆ ಎಂದರು.
ಜೆಡಿಎಸ್ ಪಕ್ಷದಲ್ಲಿ ತಮ್ಮ ರಾಜಕೀಯ ಭವಿಷ್ಯ ಕಂಡುಕೊಂಡು ಬಳಿಕ ಕಾಂಗ್ರೆಸ್ ಪಕ್ಷಕ್ಕೆ ಸೇರಿರುವ ಮಹಾನ್ ನಾಯಕರೊಬ್ಬರು ಇಂದು ಮಂಡ್ಯ ಜಿಲ್ಲೆಗೆ ಎಚ್.ಡಿ.ಕುಮಾರಸ್ವಾಮಿ ಕೊಡುಗೆ ಏನೆಂದು ಪ್ರಶ್ನಿಸುತ್ತಿದ್ದಾರೆ ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಕಿಡಿಕಾರಿದರು.
ಒಂದೇ ಸೀರೆಯನ್ನು ಪದೇ ಪದೇ ಧರಿಸುತ್ತಿದ್ದೀರಾ!?, ಹುಷಾರ್ ಕ್ಯಾನ್ಸರ್ ಬರಬಹುದು!
ಮಂಡ್ಯಕ್ಕೆ ನನ್ನ ಕೊಡುಗೆ ಏನೆಂದು ಮಂಡ್ಯದ ಮತದಾರರಿಗೆ ಗೊತ್ತಿದೆ. ಇಲ್ಲಿರುವ ಶಾಲಾ ಕಾಲೇಜುಗಳು, ಮೆಡಿಕಲ್ ಮತ್ತು ಎಂಜಿನಿಯರಿಂಗ್ ಕಾಲೇಜುಗಳು, ಸರ್ಕಾರಿ ಕಟ್ಟಡಗಳು ಸೇರಿದಂತೆ ಹಲವು ಉನ್ನತ ವಿದ್ಯಾಸಂಸ್ಥೆಗಳು, ಸಮುದಾಯ ಭವನಗಳು ಪ್ರತಿಯೊಂದು ಜೆಡಿಎಸ್ ಆಡಳಿತದ ಮೂಲಕ ಬಂದಿದೆ.
ದೇವೇಗೌಡರು ರಾಜಕೀಯಕ್ಕೆ ಕಾಲಿಟ್ಟ ದಿನದಿಂದ ಮಂಡ್ಯದ ಅಭಿವೃದ್ಧಿಗಾಗಿ ದುಡಿದಿದ್ದಾರೆ ಎಂದು ಎಚ್.ಡಿ. ಕುಮಾರಸ್ವಾಮಿ ತಿಳಿಸಿದರು.
ಇಲ್ಲಿ ಇವತ್ತು ತೋರುತ್ತಿರುವುದು ಶಕ್ತಿ ಪ್ರದರ್ಶನವಲ್ಲ. ಮತದಾರರು ಪ್ರೀತಿಯಿಂದ ಬಂದಿರುವುದು. ಸಹಜವಾಗಿಯೇ 70 ಸಾವಿರ ಮಂದಿ ಸೇರಿದ್ದಾರೆ. ಇನ್ನು ಸರಿಯಾದ ವ್ಯವಸ್ಥೆ ಕಲ್ಪಿಸಿದ್ದರೆ 2 ಲಕ್ಷಕ್ಕೂ ಹೆಚ್ಚು ಮಂದಿ ಸೇರುತ್ತಿದ್ದರು ಎಂದರು. ನಿಖಿಲ್ ಕುಮಾರಸ್ವಾಮಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತದಲ್ಲಿ ಭಾರತ ಅತಿವೇಗವಾಗಿ ಅಭಿವೃದ್ಧಿ ಹೊಂದಿದೆ. ಅವರನ್ನು ವಿಶ್ವದ ಹಲವು ದೇಶಗಳು ವಿಶ್ವನಾಯಕನೆಂದು ಒಪ್ಪಿಕೊಂಡಿದೆ ಎಂದು ಪ್ರಶಂಸಿಸಿದರು.
ವರದಿ : ಗಿರೀಶ್ ರಾಜ್ ಮಂಡ್ಯ