ಬೆಂಗಳೂರು:- ಸಂಸತ್ತಿನಲ್ಲಿ ರಾಜ್ಯದಪರ ಧ್ವನಿಯೆತ್ತುವ ಸಂಸದರು ಬೇಕು ಎಂದು ಜಮೀರ್ ಅಹಮ್ಮದ್ ಖಾನ್ ಹೇಳಿದ್ದಾರೆ.
ಕರ್ನಾಟಕದಲ್ಲಿ ಮುಸಲ್ಮಾನರ ಸಂಖ್ಯೆ 70 ಲಕ್ಷ ಎಂದು ಹೇಳಲಾಗುತ್ತಿದ್ದು ಆ ಆಧಾರದಲ್ಲಿ ಹೆಚ್ಚಿನ ಸ್ಥಾನಗಳನ್ನು ಮುಸ್ಲಿಂ ಸಮುದಾಯದ ಅಭ್ಯರ್ಥಿಗಳಿಗೆ ನೀಡಬೇಕೆಂದು ಬೇಡಿಕೆ ಸಲ್ಲಿಸಲಾಗಿದೆಯೇ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಜಮೀರ್ ಖಾನ್, ಶೇಕಡಾವಾರು ಅಂತೇನಿಲ್ಲ, ಆದರೆ ಬೆಂಗಳೂರು ಕೇಂದ್ರ, ಬೀದರ್ ಮತ್ತು ಹಾವೇರಿ ಕ್ಷೇತ್ರಗಳನ್ನು ನೀಡುವಂತೆ ಕೋರಿದ್ದೇವೆ, ಆದಾಗ್ಯೂ ಹೈ ಕಮಾಂಡ್ ಏನು ತೀರ್ಮಾನ ತೆಗೆದುಕೊಳ್ಳುತ್ತದೆಯೋ ಅದೇ ಅಂತಿಮ ಎಂದು ಹೇಳಿದರು.
ಸರ್ಕಾರ ಯಾವುದೇ ಆಗಿರಲಿ, ಸಂಸತ್ತಿನಲ್ಲಿ ರಾಜ್ಯದ ಪರ ಧ್ವನಿಯೆತ್ತುವವರ ಸಂಖ್ಯೆ ಹೆಚ್ಚಿರಬೇಕು, ಸದ್ಯದ ಸ್ಥಿತಿ ನೋಡಿ; ಕಾಂಗ್ರೆಸ್ ಪಕ್ಷದಿಂದ ಕೇವಲ ಒಬ್ಬ ಸಂಸದ ಇರೋದ್ರಿಂದ ಅವರಿಗೆ ಮಾತಾಡುವ ಅವಕಾಶ ಕೊಡುತ್ತಿಲ್ಲ, ಸುಮಲತಾ ಅಂಬರೀಶ್ ಮತ್ತು ಜೆಡಿಎಸ್ ಪಕ್ಷದ ಸಂಸದ ಸೇರಿ 27 ಸದಸ್ಯರು ಸಂಸತ್ತಿನಲ್ಲಿದ್ದರೂ ರಾಜ್ಯದ ಪರ ಧ್ವನಿ ಎತ್ತಲ್ಲ ಎಂದರು. ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿರುವ ಕುಮಾರಸ್ವಾಮಿ ಆ ಪಕ್ಷಕ್ಕಿಂತ ಒಂದು ಹಂತ ಮೇಲೆ ಹೋಗಿದ್ದು ಬೇರೆ ವಿಷಯಗಳ ಬಗ್ಗೆ ಧ್ವನಿಯೆತ್ತುತ್ತಾರೆ, ಕರ್ನಾಟಕ ಜನತೆ ಪರ ಎತ್ತಲ್ಲ ಎಂದು ಜಮೀರ್ ಹೇಳಿದರು.