ಬೆಂಗಳೂರು : ಮೂರು ಡಿಸಿಎಂ ಮಾಡಿ ಎಂದು ಬ್ಲ್ಯಾಕ್ಮೇಲ್ ಮಾಡುತ್ತಿದ್ದಾರೆ ಎಂದು ಸಹಕಾರಿ ಸಚಿವ ಕೆ.ಎನ್. ರಾಜಣ್ಣ ವಿರುದ್ಧ ಮಾಜಿ ಸಚಿವ ಬಿ. ಶಿವರಾಂ ಕಿಡಿಕಾರಿದರು.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷರನ್ನೇ ಬ್ಲ್ಯಾಕ್ಮೇಲ್ ಮಾಡುತ್ತಿದ್ದಾರೆ. ಹೈಕಮಾಂಡ್ ವಿರುದ್ಧವೇ ಮಾತನಾಡಿದ್ದಾರೆ. ನೀವು ಕೆ.ಎನ್. ರಾಜಣ್ಣರಿಗೆ ವಾರ್ನ್ ಮಾಡಿದ್ರಾ..? ಎಂದು ರಾಜಣ್ಣ ವಿರುದ್ಧ ನೇರವಾಗಿ ಅಸಮಾಧಾನ ಹೊರಹಾಕಿದರು.
28 ಕ್ಷೇತ್ರ ಗೆಲ್ಲಬೇಕು ಅಂದರೆ ಇರುವಂತಹ ಎಲ್ಲಾ ಲೋಪದೋಷಗಳನ್ನು ಸರಿಪಡಿಸಿಕೊಂಡು ಹೋಗಬೇಕು. ತುಮಕೂರಿನಲ್ಲಿ ಜನ ಬಹಳ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಯಾರೋ ಒಬ್ಬರ ಕೈಯಲ್ಲಿ ಕಾಂಗ್ರೆಸ್ ಇಲ್ಲ. ಇದೇ ಪರಿಸ್ಥಿತಿ ಮುಂದುವರಿದರೆ ಹಾಸನ ಕ್ಷೇತ್ರ ಗೆಲ್ಲಲು ಬಹಳ ಕಷ್ಟ ಆಗುತ್ತೆ ಎಂದು ವಾಗ್ದಾಳಿ ನಡೆಸಿದರು.
ಕೆಪಿಸಿಸಿ ಅಧ್ಯಕ್ಷರು ನನಗೆ ಮಾಧ್ಯಮದ ಮುಂದೆ ಏನು ಹೇಳಬಾರದು ಎಂದು ವಾರ್ನಿಂಗ್ ಮಾಡಿದ್ದಾರೆ. ಆದರೆ, ನಿಮ್ಮ ಒತ್ತಡಕ್ಕೆ ಮಣಿದು ಉತ್ತರ ಕೊಡುತ್ತಿದ್ದೇನೆ. ಒಂದಂತು ಸತ್ಯ ಅವರು ಏಕವಚನದಲ್ಲಿ ಮಾತನಾಡಿದ್ದು ನನಗೆ ಬೇಜಾರಾಗಿದೆ ಎಂದು ಬಿ. ಶಿವರಾಂ ಬೇಸರ ವ್ಯಕ್ತಪಡಿಸಿದರು.