ಬಾಗಲಕೋಟೆ: ಘಟಪ್ರಭಾ ತಟದಲ್ಲಿರುವ ಬಯಲುಸೀಮೆ ಬಾಗಲಕೋಟೆ ಜಿಲ್ಲೆಯಲ್ಲಿ ಇದೀಗ ಸುಡುಬಿಸಿಲಿ ನೊಂದಿಗೆ ಚುನಾವಣಾ ಕಾವೂ ಹೆಚ್ಚಾಗಿದೆ. ಕೂಡಲಸಂಗಮ, ಬಾದಾಮಿ ಸೇರಿದಂತೆ ಅನೇಕ ಐತಿಹಾಸಿಕ ಸ್ಥಳಗಳಿರುವ ಈ ಲೋಕಸಭಾ ಕ್ಷೇತ್ರವು ರೆಡ್ಡಿ ಸಮುದಾಯಗಳ ನಡುವಿನ ಕದನ ಕಣ ಎಂದೇ ಬಿಂಬಿಸುವ ಕಾಲವೊಂದಿತ್ತು.
ಹಾಲಿ ಸಂಸದ ಪಿ.ಸಿ. ಗದ್ದಿಗೌಡರ ಅವರಿಗೆ ಮತ್ತೊಮ್ಮೆ ಟಿಕೇಟ್ ಘೋಷಣೆಯಾಗಿದೆ. ಬಾಗಲಕೋಟೆಯಿಂದ ಅಚ್ಚರಿಯ ಅಭ್ಯರ್ಥಿ ಕಣಕ್ಕಿಳಿಯಬಹುದು ಎಂಬ ಲೆಕ್ಕಾಚಾರಗಳು ತೀವ್ರಗೊಂಡ ಬೆನ್ನಲ್ಲೇ ಹೈಕಮಾಂಡ್ ಯಾವ ಪ್ರಯೋಗಕ್ಕೂ ಮುಂದಾಗದೇ ಕೋಟೆ ನಾಡಿನಿಂದ ಹಾಲಿ ಸಂಸದ ಪಿ.ಸಿ. ಗದ್ದಿಗೌಡರ ಅವರನ್ನೇ ಕಣಕ್ಕಿಳಿಸಿದೆ.
Yaduveer Wadiyar: ರಾಜಾಳ್ವಿಕೆಯಿಂದ ರಾಜಕೀಯದೆಡೆಗೆ ಸಾಗಿದ BJP ಅಭ್ಯರ್ಥಿ ಯದುವೀರ್ ಒಡೆಯರ್ ಹಿನ್ನೆಲೆಯೇನು..?
ಕಳೆದ ನಾಲ್ಕು ಅವಧಿಯಲ್ಲಿಯೂ ಬಿಜೆಪಿ ಇಲ್ಲಿ ಗೆಲುವಿನ ನಗೆ ಬೀರಿದೆ. ಈಗ ಐದನೇಯ ಬಾರಿಗೆ ಪಿ.ಸಿ. ಗದ್ದಿಗೌಡರ ಲೋಕಸಭಾ ಅಖಾಡಕ್ಕೆ ಇಳಿದಿದ್ದಾರೆ. ಸರಳತೆ, ಸಾತ್ವಿಕತೆಯಿಂದ ಕೂಡಿದ ರಾಜಕಾರಣಿ ಎಂದೇ ಹೆಸರಾಗಿರುವ ಗದ್ದಿಗೌಡರ ಅವರ ಹೆಸರು ಪರ್ವತಗೌಡ. ಆದರೆ ಪಿ.ಸಿ. ಗದ್ದಿಗೌಡರ ಎಂದೇ ಎಲ್ಲರಿಗೂ ಖ್ಯಾತಿ, ಪ್ರಸಿದ್ಧಿ.
ಗದ್ದಿಗೌಡರ ನಡೆದು ಬಂದ ಹಾದಿ
1951 ರಲ್ಲಿ ಬಾಗಲಕೋಟೆ ಜಿಲ್ಲೆ ಹೆಬ್ಬಳ್ಳಿಯ ಗ್ರಾಮದಲ್ಲಿ ಜನಿಸಿದ ಗದ್ದಿಗೌಡರ ಹಂತ ಹಂತವಾಗಿ ರಾಜಕೀಯ ರಂಗದಲ್ಲಿ ಮೇಲೆ ಬಂದವರು. ಬೆಳಗಾವಿ ರಾಜಾ ಲಖಮಗೌಡ ಕಾಲೇಜಿನಿಂದ ಕಾನೂನು ಪದವೀಧರರಾಗಿರುವ ಗದ್ದಿಗೌಡರ ಅವರು 1980 ರ ಆರಂಭದಲ್ಲಿ ಸಾಮಾಜಿಕ ಸೇವೆಗೆ ಅಣಿಯಾದರು. 1987 ರಲ್ಲಿ ಜಿಲ್ಲೆಗಳ ಮರು ಸಂಘಟನೆಗಳ ಅಧ್ಯಯನ ಸಮಿತಿ ಅಧ್ಯಕ್ಷರಾಗಿ ಆಯ್ಕೆಯಾಗುವ ಮೂಲಕ ಗದ್ದಿಗೌಡರ ರಾಜಕೀಯ ರಂಗದ ಮುಂಚೂಣಿಗೆ ಬಂದರು. ಈ ಸಮಿತಿ ಅಧ್ಯಕ್ಷರಾಗಿ ಆಳವಾದ ಅಧ್ಯಯನ, ವಸ್ತುನಿಷ್ಠ ವರದಿ ಮೂಲಕ ಎಲ್ಲರ ಗಮನ ಸೆಳೆದರು. ಪರಿಣಾಮವಾಗಿ 1988 ರಲ್ಲಿ ಕರ್ನಾಟಕ ವಿಧಾನ ಪರಿಷತ್ಗೆ ನಾಮನಿರ್ದೇಶನಗೊಂಡರು.
ಅಲ್ಲಿಂದ ಆರಂಭವಾದ ಗದ್ದಿಗೌಡರ ರಾಜಕೀಯ ಪಯಣ ನಿರಂತರವಾಗಿ ಮುನ್ನಡೆಯುತ್ತಾ ಹೋಯಿತು. ನಂತರ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದಾದರೂ ಸಹ ಅದೃಷ್ಟ ಕೈಗೊಡಲಿಲ್ಲ. ಆದರೆ ಸಂಸದ ಸ್ಥಾನ ಅವರಿಗಾಗಿ ಕಾಯುತ್ತಾ ಕುಳಿತಿತ್ತು. 14ನೇ ಲೋಕಸಭಾ ಚುನಾವಣೆ ಸ್ವಲ್ಪ ಮೊದಲೇ ಭಾರತೀಯ ಜನತಾ ಪಕ್ಷವನ್ನು ಅಧಿಕೃತವಾಗಿ ಸೇರ್ಪಡೆಯಾದರು. ಅಲ್ಲಿಂದ ಇಲ್ಲಿಯವರೆಗೂ ಬಿಜೆಪಿಯಲ್ಲಿಯೇ ಉಳಿದುಕೊಂಡಿರುವ ಗದ್ದಿಗೌಡರ ಪಕ್ಷ ನಿಷ್ಠೆಗೂ ಹೆಸರುವಾಸಿ.
14ನೇ ಲೋಕಸಭಾ ಅಂದರೆ 2004-09ರಲ್ಲಿ ಪ್ರಥಮ ಬಾರಿ ಸಂಸದರಾಗಿ ಆಯ್ಕೆಯಾದರು. ನಂತರ 2009 ರಲ್ಲಿ ಪುನಃ ಸಂಸದರಾಗಿ ಆಯ್ಕೆಯಾದರು. ನಂತರ ನಡೆದ 2014ನೇ ಸಾಲಿನಲ್ಲಿಯೂ ವಿಜಯಶಾಲಿಯಾಗುವ ಮೂಲಕ ಹ್ಯಾಟ್ರಿಕ್ ಗೆಲುವು ಸಾದಿಸಿದರು. ನಂತರ 2019ರ ಚುನಾವಣೆಯಲ್ಲಿಯೂ ಬಿಜೆಪಿಯಿಂದ ಮರು ಆಯ್ಕೆಯಾಗಿ ಒಟ್ಟು ನಾಲ್ಕು ಬಾರಿ ಸಂಸದರಾಗಿ ಆಯ್ಕೆಯಾದ ಹೆಗ್ಗಳಿಕೆ ಪಿ.ಸಿ. ಗದ್ದಿಗೌಡರ ಅವರ ಹೆಸರಿಲ್ಲಿದೆ. ಒಟ್ಟು ನಾಲ್ಕು ಬಾರಿ ಸಂಸದರಾಗಿ ಆಯ್ಕೆಯಾಗಿರುವ ಗದ್ದಿಗೌಡರ ಅವರು ಈ ಬಾರಿ ಐದನೇಯ ಬಾರಿಗೆ ತಮ್ಮ ಅದೃಷ್ಟ ಪರೀಕ್ಷೆಗೆ ಸಜ್ಜಾಗಿದ್ದಾರೆ.