ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಶುಕ್ರವಾರ ನಡೆದ KKR ವಿರುದ್ಧದ ಪಂದ್ಯದಲ್ಲಿ RCB ಹೀನಾಯ ಸೋಲು ಕಂಡಿದೆ. ಇನ್ನೂ ಈ ಸೋಲಿಗೆ ವಿರಾಟ್ ಕೊಹ್ಲಿ ಯನ್ನು ಹೊಣೆ ಮಾಡಲಾಗಿದೆ.
ಪಂದ್ಯದಲ್ಲಿ ಟಾಸ್ ಗೆದ್ದ ಕೆಕೆಆರ್ ತಂಡದ ನಾಯಕ ಶ್ರೇಯಸ್ ಅಯ್ಯರ್ RCB ತಂಡವನ್ನು ಬ್ಯಾಟಿಂಗ್ಗೆ ಆಹ್ವಾನಿಸಿದ್ದರು. ಅದರಂತೆ ಇನಿಂಗ್ಸ್ ಆರಂಭಿಸಿದ ಫಾಫ್ ಡುಪ್ಲೆಸಿಸ್ ಹಾಗೂ ವಿರಾಟ್ ಕೊಹ್ಲಿ ಆರ್ಸಿಬಿ ತಂಡಕ್ಕೆ ಸ್ಪೋಟಕ ಆರಂಭ ಒದಗಿಸುವಲ್ಲಿ ಯಶಸ್ವಿಯಾಗಿದ್ದರು. ಆದರೆ 8 ರನ್ಗಳಿಸಿ ಡುಪ್ಲೆಸಿಸ್ ವಿಕೆಟ್ ಒಪ್ಪಿಸಿದರು. ಇದಾಗ್ಯೂ ಗ್ರೀನ್ ಜೊತೆಗೂಡಿ ಅಬ್ಬರಿಸಿದ ಕಿಂಗ್ ಕೊಹ್ಲಿ ಪವರ್ಪ್ಲೇನಲ್ಲಿ ತಂಡದ ಮೊತ್ತವನ್ನು 61 ಕ್ಕೆ ತಂದು ನಿಲ್ಲಿಸಿದರು
ಇನ್ನು ಪವರ್ಪ್ಲೇ ಬಳಿಕ ಉತ್ತಮ ಬ್ಯಾಟಿಂಗ್ ಮುಂದುವರೆಸಿದ ಕೊಹ್ಲಿ 39 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಆದರೆ ಹಾಫ್ ಸೆಂಚುರಿ ಬಳಿಕ ಕೊಹ್ಲಿಯ ಬ್ಯಾಟ್ ಝಳಪಳಿಸಲಿಲ್ಲ ಎಂಬುದೇ ಸತ್ಯ. ಪವರ್ಪ್ಲೇನಲ್ಲಿ 10ರ ಸರಾಸರಿಯಲ್ಲಿ ರನ್ ಕಲೆಹಾಕಿದ ಆರ್ಸಿಬಿ 7 ರಿಂದ 11 ಓವರ್ವರೆಗೆ ಕೇವಲ 5.2ರ ಸರಾಸರಿಯಲ್ಲಿ ರನ್ ಕಲೆಹಾಕಿತು.
ಅಲ್ಲದೆ ಅಂತಿಮವಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 182 ರನ್ ಗಳಿಸಿತು. ಇನ್ನು ಆರಂಭಿಕನಾಗಿ ಕಣಕ್ಕಿಳಿದ ವಿರಾಟ್ ಕೊಹ್ಲಿ 59 ಎಸೆತಗಳಲ್ಲಿ 83 ರನ್ ಬಾರಿಸಿ ಅಜೇಯರಾಗಿ ಉಳಿದರು
ಅಂದರೆ ಇಲ್ಲಿ ಕೊಹ್ಲಿ 10 ಓವರ್ಗಳನ್ನು (1 ಎಸೆತ ಕಡಿಮೆ) ಎದುರಿಸಿದ್ದರು. ಇದಾಗ್ಯೂ ಅವರು ಕಲೆಹಾಕಿದ್ದು 8.3 ರ ಸರಾಸರಿಯಲ್ಲಿ ಎಂಬುದು ಇಲ್ಲಿ ಉಲ್ಲೇಖಾರ್ಹ. ಹಾಗೆಯೇ 39 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಕೊಹ್ಲಿ ಆ ಬಳಿಕ 30 ರನ್ ಕಲೆಹಾಕಲು ಬರೋಬ್ಬರಿ 20 ಎಸೆತಗಳನ್ನು ತೆಗೆದುಕೊಂಡಿದ್ದರು.
ಅಂದರೆ ನಿರ್ಣಾಯಕ ಹಂತದಲ್ಲಿ ವಿರಾಟ್ ಕೊಹ್ಲಿ ಕಡೆಯಿಂದ ಸ್ಪೋಟಕ ಬ್ಯಾಟಿಂಗ್ ಮೂಡಿಬಂದಿರಲಿಲ್ಲ. ಕೊಹ್ಲಿಯ ಈ ನಿಧಾನಗತಿಯ ಬ್ಯಾಟಿಂಗ್ನಿಂದಾಗಿ ಆರ್ಸಿಬಿ ಬೃಹತ್ ಮೊತ್ತ ಪೇರಿಸಲು ಸಾಧ್ಯವಾಗಿಲ್ಲ ಎಂಬ ವಾದವನ್ನು ಇದೀಗ ಅಭಿಮಾನಿಗಳು ಮುಂದಿಡುತ್ತಿದ್ದಾರೆ