ಬೆಳಗಾವಿ : ಬೆಳಗಾವಿಯಲ್ಲಿ ರಿಯಲ್ ಎಸ್ಟೇಟ್ ಉದ್ಯಮಿ ಕಿಡ್ನಾಪ್ ಪ್ರಕರಣ ಸುಖಾಂತ್ಯಗೊಂಡಿದೆ. ಇಂದು ಈ ಬಗ್ಗೆ ಬೆಳಗಾವಿ ಎಸ್ಪಿ ಡಾ.ಭೀಮಾಶಂಕರ್ ಗುಳೇದ್ ಅವರು ಸುದ್ದಿಗೋಷ್ಠಿ ನಡೆಸಿದ್ದು, ಘಟಪ್ರಭಾ ಠಾಣಾ ವ್ಯಾಪ್ತಿಯಲ್ಲಿ ನಡೆದ ಕಿಡ್ನಾಪ್ ಪ್ರಕರಣ ಸುಖಾಂತ್ಯವಾಗಿದೆ. ಪ್ರಕರಣ ದಾಖಲಾಗಿ 24 ಗಂಟೆಯ ಒಳಗೆ ಅಪಹರಣಕ್ಕೊಳಗಾದ ವ್ಯಕ್ತಿಯನ್ನ ರಕ್ಷಣೆ ಮಾಡಲಾಗಿದೆ. ಅಪಹರಣ ಮಾಡಿದ್ದ ನಾಲ್ಕು ಜನ ಆರೋಪಿಗಳನ್ನು ಬಂಧಿಸಿದ್ದೇವೆ. ನಿಪ್ಪಾಣಿ ಹೊರಲವಲಯದಲ್ಲಿ ಅಪಹರಣಕ್ಕೊಳಗಾದ ಬಸವರಾಜ ಅಂಬಿಯನ್ನ ಇಡಲಾಗಿತ್ತು. ಘಟಪ್ರಭಾ ಪೊಲೀಸರು ನಿಪ್ಪಾಣಿ ಪೊಲೀಸರು ಒಗ್ಗೂಡಿ ತಂಡ ಮಾಡಿ ದಾಳಿ ನಡೆಸಿ ವ್ಯಕ್ತಿಯನ್ನ ರಕ್ಷಣೆ ಮಾಡಿದ್ದಾರೆ.
ಈಗಾಗಲೇ ಈಶ್ವರ ರಾಮಗಾನಟ್ಟಿ, ಸಚಿನ್ ಕಾಂಬಳೆ, ರಮೇಶ್ ಕಾಂಬಳೆ, ರಾಘವೇಂದ್ರ ಮಾರಾಪುರ ಬಂಧಿಸಿದ್ದೆವೆ. ಪ್ರಕರಣದಲ್ಲಿ ಇನ್ನೂ ಕೆಲವು ಜನ ಭಾಗಿಯಾಗಿದ್ದಾರೆ ಎನ್ನುವ ಸಂದೇಹವಿದೆ. ಅವರನ್ನೂ ಸಹ ವಶಕ್ಕೆ ಪಡೆದು ಅವರ ಮೇಲೆ ಕಾನೂನು ಕ್ರಮ ಜರುಗಿಸುತ್ತೆವೆ. ಅಪಹರಣಕ್ಕೊಳಗಾದ ಬಸವರಾಜ ಬೇರೆ ಅಕ್ರಮ ಕೆಲಸದಲ್ಲಿ ಭಾಗಿಯಾಗಿದ್ದ. ಆತ ಅಕ್ರಮದಲ್ಲಿ ಭಾಗಿಯಾಗಿದ್ದು ಉಳಿದ ಆರೋಪಿಗಳಿಗೆ ಗೊತ್ತಿತ್ತು. ಅವನನ್ನು ಕಿಡ್ನಾಪ್ ಮಾಡಿ ಹಣಕ್ಕೆ ಬೇಡಿಕೆ ಇಟ್ಟರೆ ಆತ ಯಾರಿಗೂ ಹೇಳಲ್ಲ ಎಂಬ ನಂಬಿಕೆ ಆರೋಪಿಗಳಲ್ಲಿತ್ತು. ಅಪಹರಣಕ್ಕೊಳಗಾದ ಬಸವರಾಜ ಮಗನ ಬಳಿ 5 ಕೋಟಿಗೆ ಬೇಡಿಕೆ ಇಟ್ಟಿದ್ದರು. ಬಸವರಾಜ ಪತ್ನಿ ಠಾಣೆಗೆ ಹಾಜರಾಗಿ ದೂರು ನೀಡಿದ್ರು. ದೂರು ಸ್ವೀಕರಿಸಿದ 24 ಗಂಟೆಯಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದರು.