KCC ಕ್ರಿಕೆಟ್ ಟೂರ್ನಿಗೂ ಮುನ್ನ ಕಿಚ್ಚ ಸುದೀಪ್ಗೆ ರಾಬಿನ್ ಉತ್ತಪ್ಪ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. ಟೂರ್ನಿ ಆರಂಭಕ್ಕೂ ಮುನ್ನ ರಾಬಿನ್ ಉತ್ತಪ್ಪ ತಮಗೆ ಎಚ್ಚರಿಕೆ ನೀಡಿರುವುದಾಗಿ ಕಿಚ್ಚ ಸುದೀಪ್ ಹೇಳಿರುವುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.
ಇದೇ ಡಿಸೆಂಬರ್ 23,24 & 25ರಂದು ಇಲ್ಲಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಈ ಟೂರ್ನಿ ನಡೆಯಲಿದೆ. ಟೂರ್ನಿಗೆ ಭರದ ಸಿದ್ದತೆಗಳು ನಡೆಯುತ್ತಿವೆ. , ಈ ಬಾರಿಯ ಕೆಸಿಸಿ ಟೂರ್ನಿಯಲ್ಲಿ ಮಾಜಿ ಅಂತಾರಾಷ್ಟ್ರೀಯ ಕ್ರಿಕೆಟಿಗರಾದ ಕನ್ನಡಿಗ ರಾಬಿನ್ ಉತ್ತಪ್ಪ, ಸುರೇಶ್ ರೈನಾ, ಮುರಳಿ ವಿಜಯ್, ತಿಲಕರತ್ನೆ ದಿಲ್ಷ್ಯಾನ್, ಹರ್ಷಲ್ ಗಿಬ್ಸ್ ಹಾಗೂ ಎಸ್ ಬದ್ರಿನಾಥ್ ಪಾಲ್ಗೊಳ್ಳುತ್ತಿದ್ದಾರೆ. ಈ ಟೂರ್ನಿಯ ಕುರಿತಾಗಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಕಿಚ್ಚ ಸುದೀಪ್, ರಾಬಿನ್ ಉತ್ತಪ್ಪ ತಮಗೆ ವಾರ್ನಿಂಗ್ ನೀಡಿದ್ದಾಗಿ ಹೇಳಿದ್ದಾರೆ. “ನಾನು ಸದ್ಯ ಒಳ್ಳೆಯ ಫಾರ್ಮ್ನಲ್ಲಿದ್ದೇನೆ, ಚೆನ್ನಾಗಿ ಬಾರಿಸ್ತೀನಿ” ಎಂದು ಉತ್ತಪ್ಪ ತಮಗೆ ಹೇಳಿರುವುದಾಗಿ ತಿಳಿಸಿದ್ದಾರೆ.
ಕನ್ನಡ ಹಾಗೂ ಕರ್ನಾಟಕದ ಬಗ್ಗೆ ಈ ಬಾರಿ ಕೆಸಿಸಿಯಲ್ಲಿ ವಿಭಿನ್ನವಾಗಿ ಪ್ಲಾನ್ ಮಾಡಿಕೊಂಡಿದ್ದೇವೆ. ಕಳೆದ ಬಾರಿ ಕನ್ನಡ ಬಾವುಟ ಹಾರಿಸಿದ್ದೆವು. ಈ ಬಾರಿ ಕೂಡಾ ಕನ್ನಡ ನಾಡಿನ ಕುರಿತಾಗಿ ವಿಶೇಷ ಟ್ರಿಬ್ಯೂಟ್ ಮಾಡುತ್ತಿದ್ದೇವೆ. ಟಿಕೆಟ್ ಬುಕ್ಕಿಂಗ್ ಕೂಡಾ ಎಲ್ಲಾ ಕಡೆ ಜೋರಾಗಿ ನಡೆಯುತ್ತಿದೆ ಎಂದು ಸುದೀಪ್ ಹೇಳಿದರು.
ಚಿತ್ರರಂಗದಲ್ಲಿ ಪರದೆ ಮೇಲೆ ಹೀರೋ ಇರ್ತಾರೆ. ಆದರೆ ಕೆಸಿಸಿಯಲ್ಲಿ ಯಾರೂ ಬೇಕಾದ್ರೂ ಹೀರೋಗಳಾಗಬಹುದು. ನಮ್ಮಲ್ಲಿ ಯಾವುದೇ ಕೋಪ-ತಾಪ, ಮನಸ್ತಾಪಗಳಿಲ್ಲ. ಎಲ್ಲರೂ ಒಂದೇ ಅಂದುಕೊಂಡು ಆಡುತ್ತೇವೆ. ಇಲ್ಲಿ ಶಿಸ್ತು ಮುಖ್ಯ ಎಂದು ಅವರು ಹೇಳಿದರು. ರಕ್ಷಿತ್ ಶೆಟ್ಟಿ, ರಿಷಭ್ ಶೆಟ್ಟಿ ಹಾಗೂ ರಾಜ್ ಬಿ ಶೆಟ್ಟಿ ಅವರಿಗೆ ಕ್ರಿಕೆಟ್ ಬರಲ್ಲ. ಹೀಗಾಗಿ ಅವರು ಆಡುತ್ತಿಲ್ಲ. ಇನ್ನು ಈ ಹಿಂದೆ ಯಶ್ ಕೆಸಿಸಿ ಭಾಗವಾಗಿದ್ರು, ದರ್ಶನ್, ಧೃವ ಸರ್ಜಾ ಅವರಿಗೂ ಕರೆದಿದ್ದೇವೆ. ಇಲ್ಲಿ ಯಾರೂ ಬೇಕಿದ್ರೂ ಬಂದು ಆಡಬಹುದು ಎಂದು ಸುದೀಪ್ ಹೇಳಿದ್ದಾರೆ.