ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಸಿದ್ದಪಡಿಸಿರುವ ಜನತಾ ಜೀವವೈವಿಧ್ಯ ದಾಖಲಾತಿಯನ್ನು ಪುನರ್ವಿಮರ್ಶಿಸಿ ಸಲಹೆ ಸೂಚನೆಗಳನ್ನು ಸ್ವೀಕರಿಸಿ ನವೀಕರಿಸಲು ಜೀವವೈವಿಧ್ಯ ನಿರ್ವಹಣಾ ಸಮಿತಿಯ ಅಧ್ಯಕ್ಷರು ಹಾಗೂ ಆಡಳಿತಗಾರರಾದ ರಾಕೇಶ್ ಸಿಂಗ್ ರವರು ಅಧಿಕಾರಿಗಳಿಗೆ ಸೂಚಿಸಿದರು.

ಜೀವವೈವಿದ್ಯ ದಾಖಲಾತಿಗೆ ಸಂಬಂಧಿಸಿದಂತೆ ಇಂದು ಪಾಲಿಕೆ ಕೇಂದ್ರ ಕಛೇರಿ, ಸಭಾಂಗಣ-01ರಲ್ಲಿ ನಡೆದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಜೀವವೈವಿದ್ಯ ಉಳಿಸುವ ಅಂಗವಾಗಿ ಯಾವ್ಯಾವು ಯಶಸ್ಸು ಕಂಡಿವೆ ಅದನ್ನು ದಾಖಲಿಸುವಂತಹ ಕೆಲಸವಾಗಬೇಕು. ಬೆಂಗಳೂರಿನಲ್ಲಿರುವ ಪಾರಂಪರಿಕವಾಗಿ ಇರುವಂತಹ ಜಾಗಗಳು, ಹಸಿರು ವನಗಳ ಬಗ್ಗೆ ಸಮಿಕ್ಷೆ ನಡೆಸಿ ವರದಿಸಲ್ಲಿಸಲು ಸೂಚಿಸಿದರು. ಕ್ರಮಬದ್ಧವಾಗಿ ಜೀವವೈವಿಧ್ಯ ನಿರ್ವಹಣೆಗೆ ಬೇಕಾಗುವ ಎಲ್ಲಾ ಅಗತ್ಯ ಸೌಲಭ್ಯವನ್ನು ಪಾಲಿಕೆ ಒದಗಿಸಲಿದೆ ಎಂದು ತಿಳಿಸಿದರು.
ಜೀವವೈವಿಧ್ಯ ನಿರ್ವಹಣಾ ಸಮಿತಿಯ ಸದಸ್ಯ ಕಾರ್ಯದರ್ಶಿ ಮತ್ತು ಮುಖ್ಯ ಆಯುಕ್ತರಾದ ಶ್ರೀ ತುಷಾರ್ ಗಿರಿ ನಾಥ್ ಮಾತನಾಡಿ, ನಗರದಲ್ಲಿ ಕೃಷಿ, ಅರಣ್ಯ ಹಾಗೂ ವನ್ಯಜೀವಿ ವಿಭಾಗದಲ್ಲಿ ಜೀವ ವೈವಿಧ್ಯ ನಿರ್ವಹಣೆ ಸಂಬಂಧಿಸಿದಂತೆ ಸಂಪೂರ್ಣ ದಾಖಲಾತಿ ತಯಾರಿಸಲು ಜೀವ ವೈವಿಧ್ಯ ನಿರ್ವಹಣಾ ಸಮತಿ ಸದಸ್ಯರಿಗೆ ಸೂಚಿಸಿದರು.
ಕೃಷಿ ಕ್ಷೇತ್ರದಲ್ಲಿ ಸಂಬಂಧಪಟ್ಟ ನರ್ಸರಿಗೆ ಭೇಟಿ ನೀಡಿ ವಿಶಿಷ್ಟವಾದ ತಳಿಗಳ ಬಗ್ಗೆ ಸಮೀಕ್ಷೆ ನಡೆಸಬೇಕು. ಜೊತೆಗೆ ನಮ್ಮ ಬೆಂಗಳೂರಿನ ವಾತಾವರಣಕ್ಕೆ ತಕ್ಕಂತೆ ಬೆಳೆಯುತ್ತಿರುವ ಹೊಸ ತಳಿಗಳ ಬಗ್ಗೆ ಪಟ್ಟಿ ಮಾಡಬೇಕು. ಅರಣ್ಯ ಇಲಾಖೆಗೆ ಸಂಬಂಧಿಸಿದಂತೆ ಮರಗಳ ಬಗ್ಗೆ ಸಮೀಕ್ಷೆ ನಡೆಸಿ ಯಾವ ಮರಗಳು ವಿನಾಶದ ಅಂಚಿನಲ್ಲಿದೆ, ಯಾವ ಮರಗಳು ಹೆಚ್ಚಿವೆ ಎಂಬುದರ ಬಗ್ಗೆ ವಿವರ ಪಡೆಯಬೇಕು ಎಂದು ಹೇಳಿದರು. ವನ್ಯಜೀವಿ ಸಂಬಂಧಿಸಿದಂತೆ ಅಪಾಯದ ಅಂಚಿನಲ್ಲಿರುವ ಪಕ್ಷಿಗಳು ಹಾಗೂ ವಿಶಿಷ್ಟ ಜೀವಿಗಳ ಬಗ್ಗೆ ಸಮಿಕ್ಷೆ ನಡೆಸಿ ಅದರ ಉಳಿವಿಗಾಗಿ ಬೇಕಾಗುವ ಎಲ್ಲಾ ರೀತಿಯ ಕ್ರಮಗಳ ಬಗ್ಗೆ ಸಂಪೂರ್ಣ ವಿವರಗಳನ್ನು ನೀಡಲು ಸೂಚಿಸಿದರು.
ಸದರಿ ಸಭೆಯಲ್ಲಿ ಕೈಗೊಂಡ ಪ್ರಮುಖ ನಿರ್ಣಯಗಳು:
1. 2020ನೇ ಸಾಲಿನಲ್ಲಿ ಪ್ರಕಟಿಸಿರುವ ಜನತಾ ಜೀವವೈವಿಧ್ಯ ದಾಖಾಲಾತಿಯನ್ನು ಪುರ್ನವಿಮರ್ಶಿಸಿ ಸಲಹೆ ಸೂಚನೆಗಳನ್ನು ಸ್ವೀಕರಿಸಿ ನವೀಕರಿಸುವುದು.
2. ಬಿಬಿಎಂಪಿ ವ್ಯಾಪ್ತಿಯಲ್ಲಿ ಜೀವವೈವಿಧ್ಯತೆ ಉಳಿಸಲು ಕಾರ್ಯತಂತ್ರ ರೂಪಿಸುವುದು ಮತ್ತು ಕಾರ್ಯಗತಗೊಳಿಸುವುದು.
3. ಬಿಬಿಎಂಪಿ ವ್ಯಾಪ್ತಿಯಲ್ಲಿ ಜೀವವೈವಿಧ್ಯತೆ ಉಳಿಸಲು ಹಾಗೂ ಜನತಾ ಜೀವವೈವಿಧ್ಯತೆ ದಾಖಾಲಾತಿ ನವೀಕರಿಸಲು ಆಸಕ್ತ ಸ್ವಯಂಸೇವಕರನ್ನು ಒಳಗೊಂಡ ತಂಡ ರೂಪಿಸುವುದು.
ಸಭೆಯಲ್ಲಿ ಅರಣ್ಯ ವಿಭಾಗದ ವಿಶೇಷ ಆಯುಕ್ತರಾದ ಪ್ರೀತಿ ಗೆಹ್ಲೋಟ್, ಉಪ ಅರಣ್ಯ ಸಂರಕ್ಷಣಾಧಿಕಾರಿಯಾದ ಬಿ.ಜಿ.ಎಲ್.ಸ್ವಾಮಿ, ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕರಾದ ಚಂದ್ರಶೇಖರ್, ಸಮಿತಿಯ ಸದಸ್ಯರುಗಳಾದ ಶ್ರೀ ಅಕ್ಷಯ್ ಹೆಬ್ಲಿಕರ್, ಡಾ. ನಂದಿನಿ.ಎನ್. ಡಾ. ಉಷಾ ಆನಂದಿ, ಶ್ರೀ ವಿಜಯ್ ನಿಶಾಂತ್, ಶ್ರೀ ಭಾರ್ಗವ್.ಆರ್ ಸೇರಿದಂತೆ ಸಮಿತಿಯ ಸದಸ್ಯರು ಸಭೆಯಲ್ಲಿ ಭಾಗವಹಿಸಿದ್ದರು.

