ಬೆಂಗಳೂರು : ಟಿಪ್ಪು ಗೋವಿಂದ.. ಇವಾಗ ಗಟ್ಟಿ ಉಳಿಯುವುದು ರಾಮನೇ ಅಂತ ಸಿಎಂ ಸಿದ್ದರಾಮಯ್ಯರಿಗೆ ಅರ್ಥವಾಗಿದೆ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಕುಟುಕಿದರು.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಇಷ್ಟು ದಿನ ಜೈ ಟಿಪ್ಪು ಸುಲ್ತಾನ್ ಎಂದವರ ಬಾಯಲ್ಲಿ ಜೈ ಶ್ರೀರಾಮ್ ಅಂತ ಘೋಷಣೆ ಬಂದಿದೆ. ಇದು ಆಶ್ಚರ್ಯ ಹಾಗೂ ಅದ್ಭುತ ಎಂದು ಚಾಟಿ ಬೀಸಿದರು.
ಲೋಕಸಭೆಯಲ್ಲಿ ಒಂದು ಸೀಟು ಉಳಿಸಲು ರಾಮನಿಗೆ ಜೈ ಅನ್ತಿದ್ದಾರೆ. ಟಿಪ್ಪುವನ್ನು ಎಲ್ಲಿ ಬಿಟ್ಟಿರಿ, ಟಿಪ್ಪು ಕಥೆ ಏನಾಗಬೇಕು. ಟಿಪ್ಪು ಗೋವಿಂದ ಇವಾಗ ಗಟ್ಟಿ ಉಳಿಯುವುದು ರಾಮನೇಎಂದು ಸಿದ್ದರಾಮಯ್ಯಗೆ ಅರ್ಥವಾಗಿದೆ. ಇವಾಗ ಅಯೋಧ್ಯೆ ರಾಮಮಂದಿರಕ್ಕೆ ಹೋಗ್ತೀನಿ ಅಂತಿದ್ದಾರೆ ಎಂದು ಛೇಡಿಸಿದರು.
ಹಿಂದೆ ಇದೊಂದು ವಿವಾದಿತ ಸ್ಥಳ, ಅಲ್ಲಿಗೆ ಹೋಗಲ್ಲ ಎಂದಿದ್ದರು. ನ್ಯಾಯಾಲಯದ ಆದೇಶ ಆಗಿದ್ದರೂ ಅದು ವಿವಾದಿತ ಸ್ಥಳ ಎಂದಿದ್ದರು. ಇವಾಗ ದೇಶದಲ್ಲಿ ರಾಮ ರಾಮ ಎಂದು ಜನ ಪರಿವರ್ತನೆ ಆದ ಹಿನ್ನಲೆಯಲ್ಲಿ ಸಿದ್ದರಾಮಯ್ಯ ಕೂಡಾ ಪರಿವರ್ತನೆ ಆಗಿದ್ದಾರೆ. ಪಾರ್ಲಿಮೆಂಟ್ ಚುನಾವಣೆಯ ಒತ್ತಡದಿಂದ ಅವರು ಬದಲಾಗಿದ್ದಾರೆ ಎಂದು ಹೇಳಿದರು.