ಧಾರವಾಡ:- ಯೋಗೀಶಗೌಡ ಕೊಲೆ ಕೇಸ್ ಗೆ ಸಂಬಧಪಟ್ಟಂತೆ ಸಿಬಿಐ ದಿಢೀರ್ ಫೀಲ್ಡಿಗಿಳಿದಿದ್ದು, ಹಲವರಿಗೆ ನಡುಕ ಶುರುವಾಗಿದೆ.
ಈಗಾಗಲೇ ಈ ಕೇಸ್ನ ವಿಚಾರಣೆ ನ್ಯಾಯಾಲಯದಲ್ಲಿದ್ದು, ಈಗ ನ್ಯಾಯಾಲಯಕ್ಕೆ ಸಾಕ್ಷಿಗಳನ್ನು ಹಾಜರುಪಡಿಸುವುದಕ್ಕೆ ಸಿಬಿಐ ಫೀಲ್ಡ್ಗೆ ಇಳಿದಿದೆ. ಇದರಿಂದಾಗಿ ಆರೋಪಿಗಳ ಎದೆಯಲ್ಲಿ ಈಗ ಢವಢವ ಶುರುವಾಗಿದೆ.
2016 ಜೂನ್ 15ರಂದು ಸಪ್ತಾಪುರ ಬಡಾವಣೆಯ ತಮ್ಮದೇ ಮಾಲೀಕತ್ವದ ಉದಯ್ ಜಿಮ್ನಲ್ಲಿ ಯೋಗೀಶಗೌಡರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಹತ್ಯೆ ಬಳಿಕ ಇದೊಂದು ಜಮೀನು ವಿವಾದದ ಕೇಸ್ ಅಂತ ಪೊಲೀಸ್ ತನಿಖೆ ಮಾಡಿ ಆರೋಪಿಗಳನ್ನು ಬಂಧಿಸಿತ್ತು. ಆದರೆ ಸಿಬಿಐ ತನಿಖೆಯಿಂದ ನಿಜ ಆರೋಪಿಗಳು ಅಂದರ್ ಆಗಿ, ತನಿಖೆ ಮಾಡಿದ್ದ ಪೊಲೀಸ್ ಅಧಿಕಾರಿಗಳೇ ಸಿಬಿಐ ಡ್ರಿಲ್ ಎದುರಿಸಿದ್ದರು.
ಇನ್ನು ಇದೇ ಪ್ರಕರಣದ ಸಾಕ್ಷಿನಾಶ ಆರೋಪದಲ್ಲಿ ಮಾಜಿ ಸಚಿವ ವಿನಯ ಕುಲಕರ್ಣಿ ಜೈಲಿಗೆ ಹೋಗಿ ಬಂದಿರೋದು ಎಲ್ಲರಿಗೂ ಗೊತ್ತೆ ಇದೆ. ಈಗ ಆಗಿರೋ ಮಹತ್ವದ ಬೆಳವಣಿಗೆ ಏನೆಂದರೆ, ಮತ್ತೆ ಈಗ ಸಿಬಿಐ ಫೀಲ್ಡ್ಗೆ ಇಳಿದಿದೆ. ಸೋಮವಾರ ಬೆಳಿಗ್ಗೆ ಸಿಬಿಐ ತನಿಖಾಧಿಕಾರಿ ರಾಕೇಶ್ ರಂಜನ್ ನೇತೃತ್ವದ ತಂಡ 8 ವರ್ಷಗಳ ಹಿಂದೆ ಕೊಲೆಯಾಗಿದ್ದ ಸ್ಥಳಕ್ಕೆ ಭೇಟಿ ನೀಡಿದೆ. ಅದು ಕೂಡ ತಾವಷ್ಟೇ ಅಲ್ಲ, ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯದ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಗಂಗಾಧರ ಶೆಟ್ಟಿ ಅವರೊಂದಿಗೆ ಸ್ಥಳಕ್ಕೆ ಭೇಟಿ ನೀಡಿದ್ದು, ಶೆಟ್ಟಿಯವರಿಗೆ ಕ್ರೈಂ ಸ್ಪಾಟ್ನಲ್ಲೇ ನಿಂತು ಅನೇಕ ಮಾಹಿತಿಗಳನ್ನು ನೀಡಿದೆ.
ಈಗಾಗಲೇ ತನ್ನ ತನಿಖೆಯನ್ನು ಪೂರ್ಣಗೊಳಿಸಿ, ಚಾರ್ಜ್ ಶೀಟ್ ಸಹ ಸಲ್ಲಿಸಿರುವ ಸಿಬಿಐ ತಂಡ, ಈಗ ಪುನಃ ಕ್ರೈಂ ಸ್ಪಾಟ್ಗೆ ಭೇಟಿ ನೀಡಿದ್ದು, ಅನೇಕರಿಗೆ ಅಚ್ಚರಿ ಸಹ ಮೂಡಿಸಿದೆ