ಬೆಂಗಳೂರು:- ಮಂಗನ ಕಾಯಿಲೆ ನಿಯಂತ್ರಣಕ್ಕಾಗಿ ಸಚಿವ ದಿನೇಶ್ ಗುಂಡೂರಾವ್ ಸಭೆ ನಡೆಸಿದ್ದು, ಕೆಎಫ್ಡಿ ಟೆಸ್ಟಿಂಗ್ ವಿಳಂಬವಾಗದಂತೆ ಸೂಚನೆ ನೀಡಿದ್ದಾರೆ.
ಮಂಗನ ಕಾಯಿಲೆ ತಡೆಗಟ್ಟುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಕೈಗೊಂಡ ಕ್ರಮಗಳ ಕುರಿತು ಸಭೆಯಲ್ಲಿ ಚರ್ಚೆ ಮಾಡಿದ್ದು ಕಾಯಿಲೆ ನಿಯಂತ್ರಣಕ್ಕೆ ಹೆಚ್ಚಿನ ಕ್ರಮಗಳ ಕುರಿತು ಶಾಸಕರ ಅಭಿಪ್ರಾಯ ಆಲೀಸಿದರು.
ಮಂಗನ ಕಾಯಿಲೆ ರೋಗಲಕ್ಷಣಗಳು ಕಂಡುಬಂದ ತಕ್ಷಣ ಟೆಸ್ಟಿಂಗ್ ಶೀಘ್ರಗತಿಯಲ್ಲಿ ನಡೆಸುವಂತೆ ಸಚಿವ ದಿನೇಶ್ ಗುಂಡೂರಾವ್ ಆರೋಗ್ಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಅಲ್ಲದೇ ಕೆಎಫ್.ಡಿ ಪಾಸಿಟಿವ್ ಬಂದವರನ್ನ ಕಡ್ಡಾಯವಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುವಂತೆ ಸೂಚನೆ ನೀಡಿದ್ದಾರೆ. ಶಿರಸಿಯಲ್ಲಿ ಕೆಎಫ್.ಡಿ ಟೆಸ್ಟಿಂಗ್ಗೆ ಪ್ರಯೋಗಾಲಯ ಸ್ಥಾಪನೆ ಬಗ್ಗೆ ಸಭೆಯಲ್ಲಿ ಚರ್ಚೆ ಮಾಡಲಾಗಿದೆ.
ಸಭೆಯಲ್ಲಿ ಸಚಿವರಾದ ಮಧು ಬಂಗಾರಪ್ಪ, ಸಚಿವರಾದ ಮಂಕಾಳ ಎಸ್. ವೈದ್ಯ, ಶಾಸಕರಾದ ಆರಗ ಜ್ಞಾನೇಂದ್ರ, ಹೆಚ್.ಡಿ.ತಮ್ಮಯ್ಯ, ಬೇಳೂರು ಗೋಪಾಲಕೃಷ್ಣ, ನಯನ ಮೋಟಮ್ಮ ಸೇರಿದಂತೆ ಜನಪ್ರತಿನಿಧಿಗಳು, ಆರೋಗ್ಯಾಧಿಕಾರಿಗಳು ಉಪಸ್ಥಿತರಿದ್ದರು.