ಹಿಂದೂ ಸಾಂಪ್ರದಾಯದಂತೆ ತುಳಸಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತದೆ. ಮನೆಯಲ್ಲಿ ತುಳಸಿ ಗಿಡ ನೆಟ್ಟು ಪ್ರತಿದಿನ ಪೂಜಿಸುವುದರಿಂದ ಲಕ್ಷ್ಮೀ ನೆಲೆಸುತ್ತಾಳೆ ಎಂಬ ನಂಬಿಕೆ ಇದೆ. ವಿಶೇಷವಾಗಿ ವಾಸ್ತು ಮತ್ತು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ತುಳಸಿ ಗಿಡ ಋಣಾತ್ಮಕ ಅಂಶಗಳನ್ನು ಧನಾತ್ಮಕವಾಗಿ ಬದಲಾಯಿಸುವ ಶಕ್ತಿಯನ್ನು ಹೊಂದಿದೆ.
ಅದರಂತೆ ಈ ಗಿಡವನ್ನು ಮನೆಯಲ್ಲಿ ಎಲ್ಲೆಂದರಲ್ಲಿ ಇಟ್ಟರೆ ಕೆಟ್ಟ ಫಲಿತಾಂಶವನ್ನು ಪಡೆಯಬೇಕಾಗುತ್ತದೆ. ಆದ್ದರಿಂದ ಈ ಗಿಡದ ಬಗ್ಗೆ ಕೆಲವು ವಾಸ್ತು ಮಾಹಿತಿಗಳನ್ನು ತಿಳಿಯುವ ಪ್ರಯತ್ನ ಈ ಲೇಖನದಲ್ಲಿ ಮಾಡಲಾಗಿದೆ. ಮನೆಯಲ್ಲಿ ಜಾಗದ ಕೊರತೆ ಎಂಬ ಕಾರಣಕ್ಕೆ ಜನರು ಮನೆಯ ಛಾವಣಿ ಮೇಲೆ ಇಡುತ್ತಾರೆ. ವಾಸ್ತುಶಾಸ್ತ್ರದ ಪ್ರಕಾರ, ಛಾವಣಿ ಮೇಲೆ ತುಳಸಿ ಗಿಡ ಇಟ್ಟಲ್ಲಿ ಬಹಳ ಕೆಟ್ಟ ಫಲಿತಾಂಶವನ್ನು ಅನುಭವಿಸಬೇಕಾಗುತ್ತದೆ.
ಯಾರಿಗೆ ಜಾತಕದಲ್ಲಿ ಬುಧ ಗ್ರಹ ದುರ್ಬಲವಾಗಿರುತ್ತದೋ ಅಂಥವರು ತುಳಸಿ ಗಿಡವನ್ನು ಛಾವಣಿ ಮೇಲೆ ಇರಿಸಿದ್ದರಂತೂ ದೊಡ್ಡ ಮಟ್ಟದ ಹಣಕಾಸು ನಷ್ಟವನ್ನು ಅನುಭವಿಸುತ್ತಾರೆ. ಏಕೆ ಹೀಗೆ ಅಂದರೆ, ಮನೆಯ ಛಾವಣಿ ಮೇಲೆ ಇಟ್ಟ ತುಳಸಿ ಗಿಡವನ್ನು ಬಹುತೇಕರು ನಿರ್ಲಕ್ಷಿಸುತ್ತಾರೆ.
ಆದ್ದರಿಂದ ಆ ಗಿಡ ಒಣಗುವ, ಹಾಳಾಗುವ ಸಾಧ್ಯತೆ ಇರುತ್ತದೆ. ಇನ್ನು ಕೆಲವು ಸಲ ಪಕ್ಷಿಗಳು ಗಲೀಜು ಮಾಡುವ ಅವಕಾಶಗಳಿರುತ್ತದೆ. ಇದು ಆ ಮನೆಗೆ ಒಳ್ಳೆ ಸೂಚನೆ ಅಲ್ಲ. ಇನ್ನು ಈ ಗಿಡವನ್ನು ಪೂರ್ವ ದಿಕ್ಕಿನಲ್ಲಿ ಸಹ ಇಡಬಾರದು. ಹೀಗೆ ಇಡುವುದರಿಂದ ವ್ಯಾಪಾರ- ವ್ಯವಹಾರದಲ್ಲಿ ನಷ್ಟವಾಗುತ್ತದೆ, ಆ ಕುಟುಂಬದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.
ಎಲ್ಲಿರಬೇಕು ತುಳಸಿ ಗಿಡ? ತುಳಸಿ ಗಿಡವನ್ನು ಉತ್ತರ ದಿಕ್ಕಿನಲ್ಲಿ ಈಶಾನ್ಯಕ್ಕೆ ಮುಖ ಮಾಡಿದಂತೆ ಇಡಬೇಕು. ಇದನ್ನು ಹೊರತುಪಡಿಸಿದಂತೆ ಪಶ್ಚಿಮ ದಿಕ್ಕಿನಲ್ಲಿ ಸಹ ಇಡಬಹುದು. ಈ ಮೂಲಕ ಮನೆಯಲ್ಲಿ ಸಕಾರಾತ್ಮಕ ಶಕ್ತಿ ಪಸರಿಸುತ್ತದೆ. ಇನ್ನು ತುಳಸಿ ಎಲೆಯನ್ನು ಅಗೆದು ತಿನ್ನಬಾರದು. ಗಂಟಲಿನಲ್ಲಿ ಇರಿಸಿಕೊಂಡು, ನುಂಗಬೇಕು. ತುಳಸಿ ದಳವನ್ನು ಮೊಸರಿನೊಂದಿಗೆ ಬೆರೆಸಿ, ಸೇವಿಸಬೇಕು. ಇದರಿಂದ ಹಲವು ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ದೊರೆಯುತ್ತದೆ. ಇಡೀ ದಿನ ಚೈತನ್ಯ ಕಾಯ್ದುಕೊಳ್ಳಬಹುದು.
ಪ್ರತಿ ದಿನ ತುಳಸಿ ಪೂಜೆ ಮಾಡುವುದರಿಂದ ಮನೆಯ ಕುಟುಂಬ ಸದಸ್ಯರಲ್ಲಿನ ನಕಾರಾತ್ಮಕ ಭಾವನೆಗಳನ್ನು ದೂರ ಮಾಡುತ್ತದೆ. ಇನ್ನು ಅಡುಗೆ ಮನೆಯ ಬಳಿ ತುಳಸಿ ಗಿಡ ಇದ್ದಲ್ಲಿ ಕುಟುಂಬ ಸದಸ್ಯರ ಮಧ್ಯೆ ಪ್ರೀತಿ- ಸೌಹಾರ್ದ ಹೆಚ್ಚಾಗುತ್ತದೆ.