ಬಾಗಲಕೋಟೆ: ರಾಜ್ಯ ಸರ್ಕಾರದಿಂದ ಜನರ ರಕ್ಷಣೆ ಮಾಡಲು ಆಗದಿದ್ರೆ, ಸರ್ಕಾರದ ಖಜಾನೆ ಲೂಟಿ ತಪ್ಪಿಸಲು ಆಗದೇ ಇದ್ರೆ, ಕೂಡಲೇ ರಾಜೀನಾಮೆ ನೀಡಿ ಗೌರವದಿಂದ ಹೊರಗೆ ಬನ್ನಿ ಎಂದು ಸಂಸದ ಗೋವಿಂದ ಕಾರಜೋಳ ಹೇಳಿದ್ದಾರೆ. ಬಾಗಲಕೋಟೆಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರದ ಆರ್ಥಿಕ ಪರಿಸ್ಥಿತಿ ಅಧೋಗತಿಗೆ ಹೋಗಿದೆ. ಹಗಲು ದರೋಡೆಗಳು ಆಗ್ತಿವೆ, ಕೊಲೆ ಸುಲಿಗೆಗಳಾಗ್ತಿವೆ. ರಾಜ್ಯ ಸರ್ಕಾರದಿಂದ ಜನರ ರಕ್ಷಣೆ ಮಾಡಲು ಆಗದಿದ್ರೆ. ಕೂಡಲೇ ರಾಜೀನಾಮೆ ನೀಡಿ ಗೌರವದಿಂದ ಹೊರಗೆ ಬನ್ನಿ ಎಂದು ಹೇಳಿದರು.
ಇನ್ನೂ ರಾಜ್ಯದಲ್ಲಿ ಸರ್ಕಾರವಾಗಿ ಉಳಿದಿಲ್ಲ, ಮೂರು ಭಾಗಗಳಾಗಿದೆ. ಒಂದು ಸಿದ್ದರಾಮಯ್ಯನವರದ್ದು, ಎರಡನೆಯದು ಡಿ.ಕೆ. ಶಿವಕುಮಾರ್ ಗುಂಪು ಮತ್ತೊಂದು ವೀರಶೈವ ಲಿಂಗಾಯತರದೊಂದು ಗುಂಪು. ನಮಗೆ ಸಿದ್ದರಾಮಯ್ಯ ಸ್ಥಾನಗಳನ್ನು ಬಿಟ್ಟು ಕೊಡಬೇಕು ಅಂತ ಒತ್ತಾಯ ಮಾಡುತ್ತಿದ್ದಾರೆ. ಅನೇಕ ಒತ್ತಾಯಗಳನ್ನು ಮಾಧ್ಯಮಗಳ ಮೂಲಕ ನಾನು ಕೂಡ ನೋಡಿದ್ದೇನೆ ಎಂದಿದ್ದಾರೆ.
ಸಿದ್ದರಾಮಯ್ಯನವರು ಆಡಳಿತದ ಮೇಲೆ ಹಿಡಿತವನ್ನು ಕಳೆದುಕೊಂಡಿದ್ದಾರೆ. ಕಾಂಗ್ರೆಸ್ನ ಶಾಸಕರು ಮತ್ತು ಮುಖಂಡರನ್ನು ಹದ್ದುಬಸ್ತಿನಲ್ಲಿ ಇಡಲು ಅವರಿಂದ ಸಾಧ್ಯವಾಗುತ್ತಿಲ್ಲ. ಹೈಕಮಾಂಡ್ಗೂ ಪಕ್ಷದ ಶಾಸಕರು ಹಾಗೂ ಮುಖಂಡರನ್ನು ಶಿಸ್ತಿನಲ್ಲಿಡಲು ಆಗುತ್ತಿಲ್ಲ. ರಾಜ್ಯದಲ್ಲಿ ಅಭಿವೃದ್ಧಿ ಕುಂಠಿತವಾಗಿದೆ. ಇದು ಆಡಳಿತಕ್ಕೆ ಒಳ್ಳೆಯ ಲಕ್ಷಣವಲ್ಲ. ಸಿದ್ದರಾಮಯ್ಯನವರಿಗೆ ನನ್ನ ಸಲಹೆ ಏನೂ ಅಂದರೆ ಒಂದು ಶಾಸಕಾಂಗ ಪಕ್ಷದ ಸಭೆ ಕರೆದು ಯಾರಿಗೆ ಬಹುಮತ ಬರುತ್ತದೆ ಎಂಬುದನ್ನು ನೋಡಿ, ಅವರಿಗೆ ಸ್ಥಾನ ಬಿಟ್ಟು ಕೊಡುವುದು ಸೂಕ್’ ಎಂದರು.