ಹುಬ್ಬಳ್ಳಿ:- ಜವಾಬ್ದಾರಿಯುತ ಸ್ಥಾನದಲ್ಲಿರುವ ಡಿಕೆ ಸುರೇಶ್ ಬೇಜವಾಬ್ದಾರಿ ಹೇಳಿಕೆ ನೀಡಬಾರದು ಎಂದು ಬಿವೈ ವಿಜಯೇಂದ್ರ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು, ಸುರೇಶ್ ಅವರು ಒಬ್ಬ ಸಂಸದನಾಗಿ ಜವಾಬ್ದಾರಿಯುತ ಸ್ಥಾನದಲ್ಲಿರುವವರು, ಹೀಗೆ ಬೇಜವಾಬ್ದಾರಿ ಮಾತುಗಳನ್ನಾಡುವುದು ಅವರಿಗೆ ಶೋಭೆ ನೀಡೋದಿಲ್ಲ ಎಂದರು. ಕೇಂದ್ರದಿಂದ ರಾಜ್ಯಕ್ಕೆ ಸಿಗುತ್ತಿರುವ ಅನುದಾನಗಳ ಬಗ್ಗೆ ಅವರ ಗ್ರಹಿಕೆ ಸಂಪೂರ್ಣ ತಪ್ಪು, ಮನಮೋಹನ್ ಸಿಂಗ್ ಅವರು ಪ್ರಧಾನ ಮಂತ್ರಿಗಳಾಗಿದ್ದ 2004-2014 ರ ಹತ್ತು ವರ್ಷಗಳ ಅವಧಿಯಲ್ಲಿ ಕರ್ನಾಟಕಕ್ಕೆ ಸಿಕ್ಕ ಅನುದಾನ ಕೇವಲ 60,000 ಕೋಟಿ ರೂ. ಮಾತ್ರ. ಆದರೆ ಪ್ರಧಾನಿ ನರೇಂದ್ರ ಮೋದಿಯವರ ಹತ್ತ ವರ್ಷಗಳ ಅವಧಿಯಲ್ಲಿ ರಾಜ್ಯಕ್ಕೆ 2,36,000 ಕೋಟಿ ರೂ. ಅನುದಾನ ಸಿಕ್ಕಿದೆ. ತೆರಿಗೆ ಸಂಗ್ರಹದಿಂದ ರಾಜ್ಯಕ್ಕೆ ಸಿಗುವ ಅನುದಾನದ ಬಗ್ಗೆ ಹೇಳೋದಾದರೆ, ಸಿಂಗ್ ಅವರ ಅವಧಿಯಲ್ಲಿ ರಾಜ್ಯಕ್ಕೆ 81,000 ಕೋಟಿ ರೂ. ಸಿಕ್ಕರೆ ಮೋದಿ ಅವರ ಅವಧಿಯಲ್ಲಿ 2,82,000 ಕೋಟಿ ರೂ. ಸಿಕ್ಕಿದೆ. ಡಿಕೆ ಸುರೇಶ್ ಮಾತಾಡುವಾಗ ದಾಖಲೆಗಳನ್ನು ಸರಿಯಾಗಿ ನೋಡಿಕೊಂಡು ಮಾತಾಡಬೇಕು ಎಂದು ವಿಜಯೇಂದ್ರ ಎಂದರು.