ಉತ್ತರ ಪ್ರದೇಶ:– ಸರ್ಕಾರಿ ನೌಕರರಿಗೆ ಸಂಬಂಧಿಸಿದಂತೆ ಉತ್ತರಪ್ರದೇಶ ಮಹತ್ವದ ಆದೇಶ ಹೊರಡಿಸಿದೆ. ಎಲ್ಲಾ ಅಧಿಕಾರಿಗಳು ಮತ್ತು ನೌಕರರು ತಮ್ಮ ಚರ ಮತ್ತು ಸ್ಥಿರ ಆಸ್ತಿಗಳ ವಿವರಗಳನ್ನು ಆನ್ಲೈನ್ನಲ್ಲಿ ಸಲ್ಲಿಸಬೇಕು , ಇಲ್ಲದಿದ್ದರೆ ಅವರು ಆಗಸ್ಟ್ ತಿಂಗಳ ಸಂಬಳವನ್ನು ಪಡೆಯುವುದಿಲ್ಲ ಎಂದು ಸ್ಪಷ್ಟ ಆದೇಶವನ್ನು ನೀಡಿದೆ.
ವಿಮಾನ ನಿಲ್ದಾಣದಲ್ಲಿಯೇ ಪ್ರಯಾಣಿಕನಿಗೆ ಹೃದಯಾಘಾತ: ಸಿಪಿಆರ್ ಮಾಡಿ ಉಳಿಸಿದ ಅಧಿಕಾರಿಗಳು!
ಕಳೆದ ವರ್ಷ ಆಗಸ್ಟ್ನಲ್ಲಿ ನೀಡಲಾದ ಆದೇಶದ ಆರಂಭಿಕ ಗಡುವು ಡಿಸೆಂಬರ್ 31ಆಗಿತ್ತು. ಅದರ ನಂತರ ಜೂನ್ 30, ಜುಲೈ 31 ರವರೆಗೆ ಗಡುವನ್ನು ಹಲವು ಬಾರಿ ವಿಸ್ತರಿಸಲಾಯಿತು. ಆದರೆ ಕೇವಲ 26 ರಷ್ಟು ಜನರು ಮಾತ್ರ ಸರ್ಕಾರದ ಆದೇಶವನ್ನು ಪರಿಗಣಿಸಿದ್ದು, ಇದೀಗ ಗಡುವನ್ನು ಆಗಸ್ಟ್ 31ಕ್ಕೆ ಮುಂದೂಡಲಾಗಿದೆ.
ಸದ್ಯ ಉತ್ತರ ಪ್ರದೇಶದಲ್ಲಿ 17 ಲಕ್ಷ 88 ಸಾವಿರದ 429 ಸರ್ಕಾರಿ ನೌಕರರಿದ್ದಾರೆ. ಈ ಪೈಕಿ ಶೇ 26ರಷ್ಟು ನೌಕರರು ಮಾತ್ರ ತಮ್ಮ ಆಸ್ತಿ ವಿವರ ನೀಡಿದ್ದಾರೆ. ಅಂದರೆ, 13 ಲಕ್ಷಕ್ಕೂ ಹೆಚ್ಚು ಉದ್ಯೋಗಿಗಳು ಇನ್ನೂ ತಮ್ಮ ಆಸ್ತಿ ವಿವರಗಳನ್ನು ಬಹಿರಂಗಪಡಿಸಬೇಕಾಗಿದೆ. ಈ ಹಿಂದೆ ಹಲವು ಬಾರಿ ಗಡುವನ್ನು ವಿಸ್ತರಿಸಲಾಗಿದ್ದರೂ, ವಿವರಗಳನ್ನು ಸಲ್ಲಿಸಲು ವಿಫಲರಾದವರಿಗೆ ಇತ್ತೀಚಿನ ನಿರ್ದೇಶನವೇ ಅಂತಿಮವಾಗಿದೆ ಎಂದು ವರದಿಯಾಗಿದೆ.
ಆಗಸ್ಟ್ 31 ರೊಳಗೆ ಆಸ್ತಿ ವಿವರಗಳನ್ನು ನೀಡುವವರಿಗೆ ಮಾತ್ರ ಆಗಸ್ಟ್ ತಿಂಗಳ ಸಂಬಳವನ್ನು ನೀಡಲಾಗುವುದು, ಉಳಿದವರ ಸಂಬಳವನ್ನು ತಡೆಹಿಡಿಯಲಾಗುವುದು ಎಂದು ಉತ್ತರ ಪ್ರದೇಶದ ಮುಖ್ಯ ಕಾರ್ಯದರ್ಶಿ ಮನೋಜ್ ಕುಮಾರ್ ಸಿಂಗ್ ಸ್ಪಷ್ಟವಾಗಿ ಹೇಳಿದ್ದಾರೆ. ಅಲ್ಲದೆ ಆಸ್ತಿ ಘೋಷಣೆಯ ಕ್ರಮವು ‘ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ಹೆಚ್ಚಿಸುತ್ತದೆ’ ಎಂದು ಹೇಳುವ ಮೂಲಕ ರಾಜ್ಯ ಸರ್ಕಾರ ಈ ಕ್ರಮವನ್ನು ಸಮರ್ಥಿಸಿದೆ. ಈ ಕ್ರಮವು ಸರ್ಕಾರದೊಳಗೆ ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಾವು ಭ್ರಷ್ಟಾಚಾರದ ಬಗ್ಗೆ ಶೂನ್ಯ ಸಹಿಷ್ಣುತೆಯ ನೀತಿಯನ್ನು ಹೊಂದಿದ್ದೇವೆ’ ಎಂದು ಸಚಿವ ಡ್ಯಾನಿಶ್ ಆಜಾದ್ ಅನ್ಸಾರಿ ಹೇಳಿದ್ದಾರೆ ಎಂದು ವರದಿ ತಿಳಿಸಿದೆ.
ಈ ಕ್ರಮವನ್ನು ಟೀಕಿಸಿರುವ ಪ್ರತಿಪಕ್ಷ, ರಾಜ್ಯ ಸರ್ಕಾರವು ತನ್ನ ಆದೇಶವನ್ನು ಜಾರಿಗೆ ತರುವಲ್ಲಿ ವಿಫಲವಾಗಿದೆ ಎಂದು ಅನೇಕ ಬಾರಿ ಗಡುವು ವಿಸ್ತರಣೆ ಮಾಡಿರುವುದರಿಂದ ತಿಳಿಯುತ್ತದೆ ಎಂದು ಹೇಳಿದೆ. ‘2017 ರಲ್ಲೇ ಇದನ್ನು ಏಕೆ ತರಲಿಲ್ಲ? ಈಗ ಯೋಗಿ ಆದಿತ್ಯನಾಥ್ ಸರ್ಕಾರಕ್ಕೆ ಹಿನ್ನಡೆಯಾಗಿದೆ, ಅದಕ್ಕಾಗಿಯೇ ಅವರು ಇದನ್ನು ಮಾಡುತ್ತಿದ್ದಾರೆ. ತಮ್ಮ ಎಲ್ಲಾ ನೌಕರರು ಭ್ರಷ್ಟರು ಎಂದು ಅವರು ಅರಿತುಕೊಂಡಿದ್ದಾರೆ. ಇದನ್ನು ಜಾರಿಗೆ ತರಲು ಅವರಿಗೆ ಸಾಧ್ಯವಾಗುತ್ತಿಲ್ಲ’ ಎಂದು ಸಮಾಜವಾದಿ ಪಕ್ಷದ ವಕ್ತಾರ ಅಶುತೋಷ್ ವರ್ಮಾ ಹೇಳಿದ್ದಾರೆ
ಎಲ್ಲಾ ವರ್ಗದ ಅಧಿಕಾರಿಗಳು ಮತ್ತು ನೌಕರರು ಚರ ಮತ್ತು ಸ್ಥಿರ ಆಸ್ತಿಗಳ ವಿವರಗಳನ್ನು ಬಹಿರಂಗಪಡಿಸುವುದು ಕಡ್ಡಾಯವಾಗಿದೆ. ಸಿಬ್ಬಂದಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಂ ದೇವರಾಜ್ ಅವರು ಮುಖ್ಯ ಕಾರ್ಯದರ್ಶಿ ಹೊರಡಿಸಿದ ಆದೇಶವನ್ನು ಎಲ್ಲಾ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು, ಕಾರ್ಯದರ್ಶಿಗಳು ಹಾಗೂ ಇಲಾಖಾ ಮುಖ್ಯಸ್ಥರು ಮತ್ತು ಕಚೇರಿ ಮುಖ್ಯಸ್ಥರಿಗೆ ಕಳುಹಿಸಿದ್ದಾರೆ. ಆದೇಶದ ಪ್ರಕಾರ, ಈ ವಿವರಗಳನ್ನು ನೀಡಲು ವಿಫಲರಾದ ನೌಕರರನ್ನು ಬಡ್ತಿಗೆ ಪರಿಗಣಿಸಲಾಗುವುದಿಲ್ಲ.