ಕೆಆರ್ ಪುರ, ಜೂ.26-ಮಳೆ ಹಾನಿ ಪ್ರದೇಶಗಳನ್ನು ಗುರುತಿಸಿ ಮುಂಜಾಗೃತ ಕ್ರಮಗಳನ್ನು ಕೈಗೊಳ್ಳಿ ಹಾಗೂ ಅಭಿವೃದ್ಧಿ ಕಾಮಗಾರಿಯನ್ನು ಗುಣಮಟ್ಟದಿಂದ ಮಾಡುವಂತೆ ಅಧಿಕಾರಿಗಳಿಗೆ ಶಾಸಕ ಬೈರತಿ ಬಸವರಾಜ ಅವರು ಸೂಚನೆ ನೀಡಿದರು.
ಕೆಆರ್ ಪುರ ಕ್ಷೇತ್ರದ ಬಸವನಪುರ ವಾರ್ಡ್ ನ ಸ್ವತಂತ್ರನಗರದಲ್ಲಿ ರಸ್ತೆ ಹಾಗೂ ಚರಂಡಿ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಮಾಡುವ ಕೆಲಸ ಇತರ ಗುತ್ತಿಗೆದಾರರಿಗೆ ಮಾದರಿಯಾಗಿರುವಂತೆ ಕೆಲಸ ಮಾಡಿ, ಕೆಲಸ ನಡೆಯುವ ಸಂದರ್ಭದಲ್ಲಿ ಮುಖಂಡರು ಸ್ಥಳದಲ್ಲೇ ಇದ್ದು ಕಾಮಗಾರಿ ಪರಿಶೀಲಿಸಿ ಎಂದರು.
ಕಳೆದ ಒಂದು ವರ್ಷದಿಂದ ಕ್ಷೇದಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ,
ಅಭಿವೃದ್ಧಿಪಡಿಸಬೇಕೆಂಬ ಹಂಬಲ ಇದ್ದರೂ ಅನುದಾನದ ಕೊರತೆಯಿಂದ ಕೈ ಕಟ್ಟಿ ಕುಳಿತುಕೊಳ್ಳುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಪಾಲಿಕೆ ಮಾಜಿ ಸದಸ್ಯ ಜಯಪ್ರಕಾಶ್ ಮಾತನಾಡಿ, ಸ್ವತಂತ್ರ ನಗರದಲ್ಲಿ ಶಾಸಕ ಬೈರತಿ ಬಸವರಾಜರವರು ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದು ಬಸವನಪುರ ವಾರ್ಡ್ ಗೆ ವಿಶೇಷ ಕಾಳಜಿ ವಹಿಸಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಪಾಲಿಕೆ ಮಾಜಿ ಸದಸ್ಯ ಜಯಪ್ರಕಾಶ್, ಕೆಆರ್ ಪುರ ಮಂಡಲ ಅಧ್ಯಕ್ಷ ಮುನೇಗೌಡ, ಪ್ರ.ಕಾರ್ಯದರ್ಶಿ ಶ್ರೀರಾಮುಲು ಮುಖಂಡರಾದ ಉದಯ್ ಕುಮಾರ್,
ಡಿ.ಎ.ಶ್ರೀನಿವಾಸ್, ಶಿವಕುಮಾರ್, ರಾಮಕೃಷ್ಣ, ಗುತ್ತಿಗೆದಾರ ಶ್ರೀನಿವಾಸ್ ಮತ್ತಿತರರಿದ್ದರು.