ತುಮಕೂರು: ನಾನು ಕಾಂಗ್ರೆಸ್ ನಿಂದ ಬಿ ಫಾರಂ ಕೊಟ್ಟರೂ ಖಂಡಿತಾ ನಿಲ್ಲಲ್ಲ ಎಂದು ಮಾಜಿ ಸಚಿವ ಜೆಸಿ ಮಾಧುಸ್ವಾಮಿ ಹೇಳಿದರು. ಚಿಕ್ಕನಾಯಕನಹಳ್ಳಿ ತಾಲೂಕಿನ ಜೆಸಿ ಪುರದಲ್ಲಿ ಮಾತನಾಡಿದ ಅವರು, ಎಲ್ಲೋ ಪೇಪರ್ ನಲ್ಲಿ ಅನೌನ್ಸ್ ಮಾಡಿದ್ದಾರೆ. ಕಾಂಗ್ರೆಸ್ ನ ಬಿ ಫಾರಂ ಮಾಧುಸ್ವಾಮಿಗೆ ಸಿಗುತ್ತೆ ಅಂತ ಹೇಳಿದ್ದಾರೆ. ಬಿ ಫಾರಂ ಚೇಂಜ್ ಮಾಡಿ ಕಾಂಗ್ರೆಸ್ ನವರು ಕರೆದರೂ ನಿಲ್ಲಲ್ಲ. ಬಿಜೆಪಿಯವರು ಕರೆದರೂ ನಿಲ್ಲಲ್ಲ. ಯಾರೋ ನೋಡಿ ಬಂದ ಹೆಣ್ಣನ್ನ ನಾನು ಆಗಲ್ಲ. ಯಾಕೆ ಪೇಪರ್ ಅಲ್ಲಿ ಬರೀತಾರೋ ಗೊತ್ತಿಲ್ಲ ಎಂದು ಅವರು ಹೇಳಿದ್ದಾರೆ.
“ನಾನು ಯಾರಿಗೂ ಕಾಂಗ್ರೆಸ್ ಗೆ ಬರ್ತೀನಿ, ಬಂದೇ ಬರ್ತೀನಿ ಅಂತಾ ಅಲ್ಲಿನ ನಾಯಕರಿಗೆ ಹೇಳಿಲ್ಲ. ಆದರೆ, ನನ್ನನ್ನು ಕಾಂಗ್ರೆಸ್ಸಿಗೆ ಸೇರಿಸಿಕೊಳ್ಳುವ ಪ್ರಯತ್ನದಲ್ಲಿ ನನ್ನ ಮನೆಗೆ ಬಂದವರ ಬಳಿ ಸೌಜನ್ಯವಾಗಿ ಮಾತನಾಡಿದ್ದೀನಿ. ಬರ್ತೀನಿ ಅಂತಲೂ ಹೇಳಿಲ್ಲ, ಬರಲ್ಲ ಅಂತಲೂ ಎಲ್ಲೂ ಹೇಳಿಲ್ಲ’’ ಎಂದು ಅವರು ಮಾರ್ಮಿಕವಾಗಿ ನುಡಿದಿದ್ದಾರೆ.
ತನಗೆ ಟಿಕೆಟ್ ನೀಡದಂಥ ಅನಿವಾರ್ಯ ಸ್ಥಿತಿ ನಿರ್ಮಾಣವಾಗಿದ್ದರೆ ಅದು ತನಗೆ ಬೇಡವೇ ಬೇಡ, ತಮ್ಮನ್ನು ಜೊತೆಯಲ್ಲಿ ಕರೆದೊಯ್ಯುವ ನಿರೀಕ್ಷೆ ಸುಳ್ಳಾಗಿದೆ. ತಾನೀಗ ಬಿಜೆಪಿ ಅಥವಾ ಕಾಂಗ್ರೆಸ್ ಪಕ್ಷ ಟಿಕೆಟ್ ನೀಡಿದರೂ ಸ್ಪರ್ಧಿಸಲ್ಲ, ಸೋಮಣ್ಣರನ್ನು ಸರಿಸಿ ತನಗೆ ಟಿಕೆಟ್ ನೀಡುವುದೂ ಬೇಕಿಲ್ಲ, ಸ್ಪರ್ಧೆ ಮಾಡುವ ಆಸೆ ಬತ್ತಿ ಹೋಗಿದೆ,
ಆದರೆ ವಿಷಾದವೆಂದರೆ ಪಕ್ಷವನ್ನು ಆರೋಗ್ಯಕರವಾಗಿ ಮುನ್ನಡೆಸುವ ಬಗ್ಗೆ ಯಾರಿಗೂ ಯೋಚನೆ ಇದ್ದಂತಿಲ್ಲ ಎಂದು ಮಾಧುಸ್ವಾಮಿ ಹೇಳಿದರು. ತಮ್ಮ ಮುಂದಿನ ನಿರ್ಧಾರದ ಬಗ್ಗೆ ಮಾತಾಡಿದ ಅವರು ಈಗಾಗಲೇ ಎರಡು ಗುಂಪುಗಳ ಜೊತೆ ಮಾತಾಡಿದ್ದೇನೆ, ಯಾರ ಮೇಲೂ ಭಾವನೆಗಳನ್ನು ಹೇರಲ್ಲ, ಒಂದು ತೀರ್ಮಾನಕ್ಕೆ ಬಂದ ಬಳಿಕ ಅದನ್ನು ಮಾಧ್ಯಮದವರಿಗೆ ತಿಳಿಸುವುದಾಗಿ ಮಾಧುಸ್ವಾಮಿ ಹೇಳಿದರು.