ತುಮಕೂರು: ಬಿಎಸ್ ಯಡಿಯೂರಪ್ಪ ಬೆಳೆಸಿದ ಕೂಸು ನಾನು, ದಾವಣಗೆರೆ ಲೋಕಸಭೆ ಟಿಕೆಟ್ ಆಕಾಂಕ್ಷಿ ಎಂದು ಮಾಜಿ ಶಾಸಕ ಎಂಪಿ ರೇಣುಕಾಚಾರ್ಯ ಹೇಳಿದ್ದಾರೆ. ತುಮಕೂರಲ್ಲಿ ಮಾತನಾಡಿದ ರೇಣುಕಾಚಾರ್ಯ ಅವರು, ದಾವಣಗೆರೆ ಕ್ಷೇತ್ರದಿಂದ ನಾನು ಆಕಾಂಕ್ಷಿಯಾಗಿದ್ದೇನೆ. ಸಮೀಕ್ಷೆ ಮಾಡಿ ಲೋಕಸಭೆ ಟಿಕೆಟ್ ಕೊಡಲಿ ಎಂದು ಹೇಳಿದರು.
ಇನ್ನು ಜಗದೀಶ್ ಶೆಟ್ಟರ್ ಯಾವುದೋ ಕಾರಣಕ್ಕೆ ಪಕ್ಷ ಬಿಟ್ಟು ಹೋಗಿದ್ದರು. ದೇಶದಲ್ಲಿ ಮತ್ತೊಮ್ಮೆ ಮೋದಿ ಅವರನ್ನು ಪ್ರಧಾನ ಮಂತ್ರಿ ಮಾಡಬೇಕು. ಆ ಉದ್ದೇಶದಿಂದ ಸಂಘಟನೆ ಮಾಡಲು ಜಗದೀಶ್ ಶೆಟ್ಟರ್ ಬಂದಿದ್ದಾರೆ ಎಂದು ರೇಣುಕಾಚಾರ್ಯ ಹೇಳಿದರು. ಲೋಕಸಭೆಯ 28 ಕ್ಷೇತ್ರಗಳನ್ನು ಗೆಲ್ಲಿಸಲು ಜಗದೀಶ್ ಶೆಟ್ಟರ್ ಪುನರ್ ಸೇರ್ಪಡೆಯಾಗಿದ್ದಾರೆ.
ಇಡೀ ರಾಜ್ಯದ ಮುಖಂಡರು ಮತ್ತು ಕಾರ್ಯಕರ್ತರಿಗೆ ಜಗದೀಶ ಶೆಟ್ಟರು ವಾಪಸ್ ಬಂದಿರುವುದಕ್ಕೆ ಸಂತಸವಿದೆ. ಜಗದೀಶ್ ಶೆಟ್ಟರ್ ಪಕ್ಷ ಬಿಟ್ಟಾಗ ನಾನು ಯಾವತ್ತೂ ವಾಗ್ದಾಳಿ ಮಾಡಿರಲಿಲ್ಲ. ಅವರಿಗೆ ಟಿಕೆಟ್ ಸಿಗದಿದ್ದಕ್ಕೆ ನನಗೂ ನೋವಿತ್ತು. ಅವರ ವಿರುದ್ಧ ನಾನು ಮಾತಾಡಿದ್ದಿದ್ರೆ ರಾಜಕಾರಣವನ್ನೇ ಬಿಡ್ತೀನಿ. ಅವರು ಸೋತ ನಂತರ ನಾನು ನಿರಂತರವಾಗಿ ಅವರ ಸಂಪರ್ಕದಲ್ಲಿ ಇದ್ದೆ ಎಂದು ಹೇಳಿದರು.