ಬಾಗಲಕೋಟೆ: ನಗರದ ಚರಂತಿಮಠ ಕಲ್ಯಾಣ ಮಂಟಪದಲ್ಲಿ ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಕಾರ್ಯಕರ್ತರ ಸಮಾವೇಶದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತಾ ಪಾಟೀಲ್ ಅವರು ಮಾತನಾಡಿದರು. ನಾನು ಗಜಕೇಸರಿ ಯೋಗದಲ್ಲಿ ಹುಟ್ಟಿದ್ದೇನೆ. ನಾನು ಹುಟ್ಟಿದಾಗ ತಂದೆ ಶಾಸಕರಾದರು. ಚಿಕ್ಕವಳಿದ್ದಾಗ ಏನಾಗುತ್ತಿಯಾ ಅಂದರೆ ಪ್ರಧಾನಿ ಆಗುತ್ತೇನೆ ಅಂತಿದ್ದೆ. ಈಗ ಸಂಸದಳಾಗುವ ಅವಕಾಶ ಬಂದಿದೆ. ಮುಂದೆ ಪ್ರಧಾನಿಯಾಗಲೂಬಹುದು ಎಂದು ಹೇಳಿದರು.
ಸಚಿವ ಶಿವಾನಂದ ಪಾಟೀಲ ಮಾತನಾಡಿ, ಕೇವಲ ಹಣೆಬರಹ ಇದ್ದರೆ ಸಂಸದರಾಗಲ್ಲ, ಕಾರ್ಯಕರ್ತರ ಕಠಿಣ ಪರಿಶ್ರಮ ಇದ್ದರೆ ಮಾತ್ರ ಗೆಲವು ಸಾಧಿಸಬಹುದು. ಹಣೆಬರಹ ಬಗ್ಗೆ ನಾನು ನಂಬಲ್ಲ. ವ್ಯಕ್ತಿಗಿಂತ ಪಕ್ಷ ದೊಡ್ಡದು, ನನ್ನಿಂದಲೇ ಕಾಂಗ್ರೆಸ್ ಪಕ್ಷ ಅಂತ ತಿಳಿಯುವುದು ಸರಿಯಲ್ಲ. ಮನೆಯವರು ಬಂದ ಮೇಲೆ ಮನೆಯಲ್ಲಿ ಇರುವವರು ಎಲ್ಲರೂ ಬರುತ್ತಾರೆ.
ಎಲ್ಲರೂ ಪಕ್ಷದ ಸಂಘಟನೆ ಮಾಡಿ, ಜವಾಬ್ದಾರಿಯಿಂದ ಮತದಾನ ಮಾಡಿಸಿದರೆ ಪಕ್ಷದ ಗೆಲುವು ನೂರಕ್ಕೆ ನೂರರಷ್ಟು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು. ವೇದಿಕೆಯಲ್ಲಿ ಮಾಜಿ ಸಚಿವ ಎಸ್.ಆರ್.ಪಾಟೀಲ, ಬೀಳಗಿ ಶಾಸಕ ಜೆ.ಟಿ. ಪಾಟೀಲ, ಬಾದಾಮಿ ಶಾಸಕ ಭೀಮಸೇನ ಚಿಮ್ಮನಕಟ್ಟಿ, ಅಜೇಯಕುಮಾರ್ ಸರನಾಯಕ ಸೇರಿದಂತೆ ಇತರ ಮುಖಂಡರು ಉಪಸ್ಥಿತರಿದ್ದರು.