ದೆಹಲಿ/ಬೆಂಗಳೂರು:- ಮುಂದಿನ ವರ್ಷ ನಾನು ಇರ್ತೇನೋ ಇಲ್ವೊ ಗೊತ್ತಿಲ್ಲ, ನನ್ನದೊಂದು ಮನವಿ ಆಲಿಸಿ ಎಂದು ಅಧಿವೇಶದಲ್ಲಿ ದೇವೇಗೌಡರು ಮಾತಾನ್ನಾಡಿದ್ದಾರೆ.
ಭದ್ರಾ ಮೇಲ್ದಂಡೆ ಯೋಜನೆ ಕೇಂದ್ರ ಒಪ್ಪಿಕೊಂಡಿದೆ. ಬೆಂಗಳೂರು ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಿ ಎಂದರು. ನಾನು ಸಾಕಷ್ಟು ನೀರಿನ ವ್ಯಾಜ್ಯ ಬಗೆಹರಿಸಿದ್ದೇನೆ. ಮುಂದಿನ ಬಜೆಟ್ ವೇಳೆಗೆ ಇರ್ತೇನೋ ಇಲ್ವೊ ಗೊತ್ತಿಲ್ಲ. ಹಾಗಾಗಿ ಬೆಂಗಳೂರು ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿದ್ದಾರೆ.
ಬೆಂಗಳೂರು ನಗರದಲ್ಲಿ ಕುಡಿಯುವ ನೀರು ಸಮಸ್ಯೆ ಇದೆ. ನಾನು ಯಾರನ್ನು ಟೀಕಿಸಲು ಹೋಗುವುದಿಲ್ಲ. ಹಣಕಾಸು ಸಚಿವರು ಕರ್ನಾಟಕದಿಂದ ಆಯ್ಕೆ ಆಗಿದ್ದಾರೆ. ಜನರು ಕುಡಿಯುವ ನೀರಿಲ್ಲದೇ ಸಂಕಷ್ಟದಲ್ಲಿದ್ದಾರೆ ಎಂದಿದ್ದಾರೆ.
ತಮಿಳುನಾಡಿಗೆ ನೀರು ಹರಿಸುವಂತೆ ಆದೇಶಿಸಲಾಗಿತ್ತು. ಈಗ ಮಳೆಯಿಂದ ಎಲ್ಲವೂ ಸುಗಮವಾಗಿದೆ. ಒಂದು ಮಳೆ ಬರದಿದ್ದರೆ ಪರಿಸ್ಥಿತಿ ಏನು ಹೇಳಿ ಎಂದು ಪ್ರಶ್ನಿಸಿದ್ದಾರೆ. ಹಳೇ ಮೈಸೂರು ಭಾಗ, ಬೆಂಗಳೂರಿಗೆ ಇದೇ ಆಧಾರ. ಇದಕ್ಕಾಗಿ ಜನರು ಎನ್ಡಿಎಗೆ ಮತವನ್ನ ಹಾಕಿದ್ದಾರೆ ಎಂದು ಹೇಳಿದ್ದಾರೆ.
ನಾನು ಕೃಷಿ, ನಿರುದ್ಯೋಗ ಸಮಸ್ಯೆ ಬಗ್ಗೆ ಮಾತಾಡುತ್ತೇನೆ. ಬದ್ಧತೆ ಇರುವವರನ್ನು ಕೃಷಿ ಸಚಿವರನ್ನ ಮಾಡಿದ್ದಾರೆ. ಅನುಭವ ಇರುವ ತಂಡ ಆಯ್ಕೆ ಮಾಡಿಕೊಂಡಿದ್ದಾರೆ. ಸಿಎಂ ಆಗಿದ್ದಾಗ ಮೋದಿ ಸಾಕಷ್ಟು ಅಭಿವೃದ್ಧಿ ಮಾಡಿದ್ದಾರೆ. ಬೇರೆ ರಾಜ್ಯಗಳಿಗೆ ಹೋಲಿಸಿದರೆ ಗುಜರಾತ್ ಮಾದರಿ ಎಂದು ಪ್ರಧಾನಿ ಮೋದಿಯನ್ನು ಹೆಚ್ಡಿ ದೇವೇಗೌಡರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಬಜೆಟ್ ಹೃದಯಪೂರ್ವಕವಾಗಿ ಬೆಂಬಲಿಸುತ್ತೇನೆ. 1991ರಲ್ಲಿ ಸಂಸತ್ಗೆ ಬಂದೆ, ಈಗ ನನಗೆ 92 ವರ್ಷ. ಮುಂದಿನ ಬಜೆಟ್ ಬಗ್ಗೆ ಮಾತಾಡ್ತೇನೋ ಇಲ್ವೋ ಗೊತ್ತಿಲ್ಲ. ನಾನು ಎನ್ಡಿಎ ಭಾಗವಾಗಿದ್ದೇನೆ ಅದಕ್ಕಾಗಿ ಧನ್ಯವಾದ ಎಂದಿದ್ದಾರೆ.
ಕೃಷಿಯಲ್ಲಿ ಉತ್ಪಾದಕತೆಯನ್ನು ಹೆಚ್ಚಿಸಲು ಒತ್ತು ನೀಡಿದೆ. ಹಂಚಿಕೆ ಸರಪಳಿ ಬಲಿಷ್ಠಗೊಳಿಸಲು ಕ್ರಮ ಕೈಗೊಂಡಿದೆ. ಉದ್ಯೋಗ ಹೆಚ್ಚಿಸಲು NDA ಸರ್ಕಾರ ಆದ್ಯತೆ ನೀಡಿದೆ ಎಂದು ತಿಳಿಸಿದರು. ಮೈತ್ರಿ ಸರ್ಕಾರವನ್ನು ನಡೆಸುವುದು ತುಂಬಾ ಕಷ್ಟ. ನಾನು ಮೈತ್ರಿ ಸರ್ಕಾರವನ್ನು ನಡೆಸಿದ್ದೇನೆ. ಆದರೆ ಮೋದಿ ಎಲ್ಲೂ ಹೊಂದಾಣಿಕೆ ಮಾಡಿಕೊಳ್ಳದೇ ಜವಾಬ್ದಾರಿ ನಿಭಾಯಿಸಿದ್ದಾರೆ ಎಂದು ಹೇಳಿದ್ದಾರೆ.