ಕನಕಪುರ:- ಆ ಮುನಿರತ್ನ ತರ ನಾನು ಹೇಡಿಯಲ್ಲ ಎಂದು ಡಿಕೆ ಸುರೇಶ್ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ಒಂದು ಕಾಲದಲ್ಲಿ ನಮ್ಮ ಮಿತ್ರರಾಗಿದ್ದ ರಾಜರಾಜೇಶ್ವರಿ ನಗರದ ಶಾಸಕ ಮುನಿರತ್ನರವರು ಹೇಡಿಯಂತೆ ರೀತಿಯಲ್ಲಿ ಮನೆಯೊಳಗಿದ್ದ ವೇಳೆ ಅವರಿಗೆ ರಕ್ಷಣೆ ಕೊಟ್ಟಿದ್ದು ಇದೇ ಡಿ.ಕೆ.ಸುರೇಶ್ ಎಂಬುದನ್ನು ಮರೆತು ಇಂದು ಕೊರೋನಾ ಸಂದರ್ಭದಲ್ಲಿ ನಾನು ಮಾಡಿದ ಕಾರ್ಯವನ್ನು ಗೇಲಿ ಮಾಡುವುದು ಅವರಿಗೆ ಶೋಭೆ ತರುವುದಿಲ್ಲ ಎಂದರು.
ರಾಜರಾಜೇಶ್ವರಿ ನಗರದ ಜನತೆಗೆ ಯಾರು ಹೇಡಿ-ಕೇಡಿ ಎಂದು ಗೊತ್ತಿದೆ. ಕೋವಿಡ್ ಸಂದರ್ಭದಲ್ಲಿ ಇಡೀ ದೇಶದಲ್ಲಿ ಲಾಕ್ ಡೌನ್ ಮಾಡಿದಾಗ ರಾಜ್ಯ ಸರ್ಕಾರ ಕೈಚೆಲ್ಲಿ ಕುಳಿತ ಸಂದರ್ಭದಲ್ಲಿ ರೈತರು ಬೆಳೆದ ಬೆಳೆಗಳು ಮಾರಾಟ ಮಾಡಲು ಸಾಧ್ಯವಾಗದೆ ನಷ್ಟ ಅನುಭವಿಸುತ್ತಿರುವುದನ್ನು ಕಂಡ ನಾನು ಮತ್ತು ಶಿವಕುಮಾರ್ ರೈತರ ಬೆಳೆಗಳನ್ನು ಖರೀದಿ ಮಾಡಿ ಜನತೆಗೆ ಹಂಚುವ ಕೆಲಸ ಮಾಡಿದ್ದು ನನ್ನ ಕ್ಷೇತ್ರದ ಜನರಿಗೆ ನನ್ನ ಕೈಲಾದಷ್ಟು ಸೇವೆ ಮಾಡುವ ಉದ್ದೇಶವೇ ಹೊರತು ಯಾರನ್ನು ಮೆಚ್ಚಿಸಲು ಅಲ್ಲ ಎಂದು ತಿರುಗೇಟು ನೀಡಿದರು.
ತೆರಿಗೆ ವಿಚಾರದಲ್ಲಿ ನಮ್ಮ ಕನ್ನಡ ನಾಡಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ಪ್ರಶ್ನೆ ಮಾಡಿ ಕೇಂದ್ರ ಸರ್ಕಾರದಿಂದ ಕನ್ನಡಿಗರ ಬಗ್ಗೆ ಮಲತಾಯಿ ಧೋರಣೆಯನ್ನು ಎತ್ತಿ ತೋರಿಸಿದಕ್ಕೆ ನನ್ನನ್ನು ದೇಶದ್ರೋಹಿ ಎಂದು ಬಿಂಬಿಸಲು ಹೊರಟಿರುವ ಬಿಜೆಪಿ ಪಕ್ಷಕ್ಕೆ ಕರುನಾಡಿನ ಜನತೆ ತಕ್ಕ ಪಾಠ ಕಲಿಸಬೇಕಾಗಿದೆ. ಸುಮಾರು 24 ಲಕ್ಷ ಕೋಟಿ ತೆರಿಗೆ ಹಣ ನಮ್ಮ ಕರ್ನಾಟಕದಿಂದ ಹೋಗುತ್ತಿದ್ದು, ಒಬ್ಬ ಕನ್ನಡಿಗ ತಲಾ 13,428 ರು. ತೆರಿಗೆ ಕಟ್ಟುತ್ತಿದ್ದಾನೆ. ಉತ್ತರ ಪ್ರದೇಶದ ಒಬ್ಬ ವ್ಯಕ್ತಿ ಕೇವಲ 2793 ರು. ತೆರಿಗೆ ಕಟ್ಟುತ್ತಿದ್ದಾನೆ. ಆದರೆ ಕೇಂದ್ರ ಸರ್ಕಾರ ತೆರಿಗೆ ಹಣ ಹಂಚಿಕೆಯಲ್ಲಿ ತಾರತಮ್ಯ ತೋರುತ್ತಿದ್ದು, ಬಹುಪಾಲು ಉತ್ತರ ಭಾರತದ ರಾಜ್ಯಗಳಿಗೆ ಹಂಚಿಕೆ ಮಾಡುವ ಮೂಲಕ ದಕ್ಷಿಣ ಭಾರತದ ರಾಜ್ಯಗಳಿಗೆ ವಂಚನೆ ಮಾಡುತ್ತಿದ್ದು ನಾವು ಕಟ್ಟುವ ತೆರಿಗೆ ಹಣದಲ್ಲಿ ಕನಿಷ್ಠ ಶೇಕಡ 50 ಭಾಗ ನಮಗೆ ನೀಡಿದರೆ, ಕನ್ನಡ ನಾಡಿನ ಅಭಿವೃದ್ಧಿಗೆ ಸಹಕಾರಿಯಾಗಲಿದೆ. ಇದನ್ನು ಕೇಳಿದ ನನ್ನನ್ನು ರಾಷ್ಟ್ರದ್ರೋಹಿ ಎಂಬಂತೆ ಬಿಂಬಿಸಿದ್ದು ಈ ಚುನಾವಣೆಯಲ್ಲಿ ಅವರಿಗೆ ತಿರುಗುಬಾಣವಾಗಲಿದೆ ಎಂದರು.