ಬೆಂಗಳೂರು:- ಡೋಂಟ್ ವರಿ, ನಾನು ಆರೋಗ್ಯವಾಗಿದ್ದೇನೆ ಎಂದು ಹೇಳುವ ಮೂಲಕ ಅನಾರೋಗ್ಯ ಸುದ್ದಿಗೆ ದೇವೇಗೌಡರ ಸ್ಪಷ್ಟನೆ ನೀಡಿದ್ದಾರೆ.
ಹಿರಿಯ ರಾಜಕಾರಣಿಯಾಗಿರುವ ಎಚ್.ಡಿ ದೇವೇಗೌಡರಿಗೆ ಗುರುವಾರ ಮುಂಜಾನೆ ಸಣ್ಣ ಪ್ರಮಾಣದ ಆರೋಗ್ಯ ವ್ಯತ್ಯಯ (Health Problem) ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ (Manipal Hospital) ದಾಖಲಿಸಲಾಗಿತ್ತು. 90 ವರ್ಷದ ದೇವೇಗೌಡರಿಗೆ ಗುರುವಾರ ಬೆಳಗ್ಗೆ ಉಸಿರಾಟ ಸಮಸ್ಯೆ (Breathing Problem) ಕಾಣಿಸಿಕೊಂಡ ಹಿನ್ನೆಲೆಯಲ್ಲಿ, ಕೂಡಲೇ ಅವರನ್ನು ಮಣಿಪಾಲ್ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಶ್ವಾಸಕೋಶ ತಜ್ಞ ಡಾ.ಸತ್ಯನಾರಾಯಣ ಅವರು ಪರೀಕ್ಷೆ ನಡೆಸಿ ಚಿಕಿತ್ಸೆಗಾಗಿ ದಾಖಲಿಸಿಕೊಂಡರು ಎನ್ನಲಾಗಿದೆ. ಆದರೆ, ಅವರ ಅನಾರೋಗ್ಯಕ್ಕೆ ಸಂಬಂಧಿಸಿ ಕೆಲವು ಮಾಧ್ಯಮಗಳಲ್ಲಿ ಅತಿರಂಜಿತ ವರದಿಗಳು ಪ್ರಕಟಗೊಂಡ ಹಿನ್ನೆಲೆಯಲ್ಲಿ ಅವರೇ ಸ್ಪಷ್ಟೀಕರಣ ನೀಡಿದ್ದಾರೆ.
ದೇವೇಗೌಡರು ಆರೋಗ್ಯವಾಗಿಯೇ ಇದ್ದಾರೆ. ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ಹೀಗಾಗಿ ಆತಂಕ ಪಡುವ ಅಗತ್ಯ ಇಲ್ಲ ಎಂದು ಮಣಿಪಾಲ್ ಆಸ್ಪತ್ರೆಯ ವೈದ್ಯರೂ ಮಾಹಿತಿ ನೀಡಿದ್ದಾರೆ. ಅವರು ಆಹಾರ ಸೇವನೆ ಮಾಡುತ್ತಿದ್ದಾರೆ, ಅವರ ಉಸಿರಾಟವೂ ಸಹಜ ಸ್ಥಿತಿಗೆ ಬರುತ್ತಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಇದೇ ವಿಚಾರವನ್ನು ದೇವೇಗೌಡರೂ ಟ್ವೀಟ್ ಮಾಡಿದ್ದಾರೆ.