ಬೀದರ್: ಬೀದರ್ನಲ್ಲಿ ನಾಗರಿಕ ವಿಮಾನಯಾನ ಸೇವೆ ರದ್ದುಗೊಂಡಿದ್ದು ಅತ್ಯಂತ ದುರದೃಷ್ಟಕರ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೀದರ್ ನಲ್ಲಿ ನಾಗರಿಕ ವಿಮಾನಯಾನ ಸೇವೆ ರದ್ದುಗೊಂಡಿದ್ದು ಅತ್ಯಂತ ದುರದೃಷ್ಟಕರ. ಇಲ್ಲಿನ ಪ್ರವಾಸೋದ್ಯಮ, ಕೈಗಾರಿಕೋದ್ಯಮ ಸೇರಿ ನಾಗರಿಕರ ಪ್ರಯಾಣಕ್ಕೆ ಸಾಕಷ್ಟು ಅನುಕೂಲವಾಗಿತ್ತು.
ಇದೀಗ ಅದು ಹಠಾತ್ ರದ್ದಾಗಿದೆ. ಈ ಕುರಿತಂತೆ ರಾಜ್ಯದ ಹಿರಿಯ ಅಧಿಕಾರಿಗಳಷ್ಟೇ ಅಲ್ಲ ಕೇಂದ್ರದ ಸಂಬಂಧಿತ ಅಧಿಕಾರಿಗಳೊಂದಿಗೆ ಚರ್ಚಿಸಿ ಶೀಘ್ರ ನಾಗರಿಕ ವಿಮಾನಯಾನ ಆರಂಭಕ್ಕೆ ಕ್ರಮವಹಿಸ ಲಾಗುವದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ತಿಳಿಸಿದರು. ಇನ್ನು ನಾನಂತೂ ಮುಂಬರುವ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲ್ಲ.
ಪಕ್ಷದ ಹೈಕಮಾಂಡ್ ತೀರ್ಮಾನ ಪಾಲಿಸುತ್ತೇನೆ ಎಂದು ಸ್ಪಷ್ಟಪಡಿಸಿದರು. ರಾಜ್ಯದ ಕೆಲ ಸಚಿವರನ್ನು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಕಾಂಗ್ರೆಸ್ ಹೈಕಮಾಂಡ್ ಚಿಂತಿಸಿದೆ ಎಂಬುವದು ಊಹಾಪೋಹ ಅಂಥದ್ಯಾವುದೇ ಚರ್ಚೆಯಾಗಲಿ ನಿರ್ಧಾರವಾಗಲಿ ಆಗಿಲ್ಲ. ಚುನಾವಣಾ ಕಣಕ್ಕಿಳಿಸುವ ವಿಚಾರ ಹೈಕಮಾಂಡ್ ನಿರ್ಧರಿಸುತ್ತದೆ ಯಾರೇ ನಿಂತರೂ ನಾವೆಲ್ಲ ಸೇರಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಗೆಲ್ಲಿಸಿಕೊಂಡು ಬರುತ್ತೇವೆ ಎಂದು ಸಚಿವ ಈಶ್ವರ ಖಂಡ್ರೆ ತಿಳಿಸಿದರು.