ಹುಬ್ಬಳ್ಳಿ: ಇದೇ ಫೆ.18ರಂದು ನಡೆಯಲಿರುವ ಹುಬ್ಬಳ್ಳಿ ಅಂಜುಮನ್ ಸಂಸ್ಥೆ ಚುನಾವಣೆಯಲ್ಲಿ ನಾನು ಯಾವುದೇ ತಂಡ ಅಥವಾ ಅಭ್ಯರ್ಥಿಗೆ ಬೆಂಬಲ ಸೂಚಿಸಿರುವುದಿಲ್ಲ. ಯಾರದರೂ ಚುನಾವಣೆ ಪ್ರಚಾರದಲ್ಲಿ ನನ್ನ ಹೆಸರಾಗಲಿ, ಭಾವಚಿತ್ರವಾಗಲಿ ಬಳಸಿಕೊಂಡರೆ ಅಂಥವರ ವಿರುದ್ಧ ಕಠಿಣ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದು ಹುಬ್ಬಳ್ಳಿ-ಧಾರವಾಡ ಪೂರ್ವ ವಿಧಾನಸಭಾ ಕ್ಷೇತ್ರದ ಶಾಸಕ ಪ್ರಸಾದ ಅಬ್ಬಯ್ಯ ಹೇಳಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಅಂಜುಮನ್ ಸಂಸ್ಥೆ ಚುನಾವಣೆಯಲ್ಲಿ ಭಾಗವಹಿಸಿದ ತಂಡಗಳು ಮತ್ತು ಸ್ವತಂತ್ರವಾಗಿ ಸ್ಪರ್ಧಿಸಿರುವ ಎಲ್ಲ ಅಭ್ಯರ್ಥಿಗಳು ನನಗೆ ತುಂಬಾ ಆಪ್ತರು. ಆದರೆ, ಸದ್ಯ ನಡೆದಿರುವ ಅಂಜುಮನ್ ಸಂಸ್ಥೆ ಚುನಾವಣೆಯಲ್ಲಿ ಸ್ಪರ್ಧಿಸಿರುವ ತಂಡಗಳಿಗಾಗಲಿ ಅಥವಾ ಅಭ್ಯರ್ಥಿಗಾಗಲಿ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಯಾರಿಗೂ ಬೆಂಬಲ ಸೂಚಿಸಿರುವುದಿಲ್ಲ. ಇಷ್ಟಾಗಿಯೂ ಕೆಲ ಕಿಡಿಗೇಡಿಗಳು ನನ್ನ ಮತ್ತು ನನ್ನ ಸಹೋದರರ ಫೋಟೋ ಬಳಸಿಕೊಂಡು ಶಾಸಕರ ಬೆಂಬಲ ನಮ್ಮ ತಂಡಕ್ಕೆ ಇದೆ ಎಂಬ ಸಂದೇಶವನ್ನು ವಾಟ್ಸಪ್, ಫೇಸ್ಬುಕ್ಗಳಲ್ಲಿ ಹರಿಬಿಡುತ್ತಿದ್ದಾರೆ. ಸದ್ಯ ರಾಜ್ಯ ವಿಧಾನಸಭೆ ಬಜೆಟ್ ಅಧಿವೇಶ ನಡೆದಿರುವ ಹಿನ್ನಲೆ ನಾನು ಬೆಂಗಳೂರು ಪ್ರವಾಸದಲ್ಲಿರುವ ಕಾರಣ ಅಂಥ ಕಿಡಿಗೇಡಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಲು ನನ್ನ ಆಪ್ತರಲ್ಲಿ ಒಬ್ಬರಾದ ಶ್ರೀನಿವಾಸ ಬೆಳದಡಿ ಅವರ ಮೂಲಕ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ದಯವಿಟ್ಟು ಅನ್ಯತಾ ಭಾವಿಸದೇ ಅಂಜುಮನ್ ಸಂಸ್ಥೆ ಚುನಾವಣೆಯಲ್ಲಿ ನನ್ನ ಹೆಸರಾಗಲಿ ಭಾವಚಿತ್ರ ಬಳಸಕೂಡದು ಎಂದು ಶಾಸಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.