ಹುಬ್ಬಳ್ಳಿ: ‘ಕಲಾ ಸುಜಯ ನೃತ್ಯ ಸಂಸ್ಥೆಯ 10ನೇ ವರ್ಷದ ಸಂಭ್ರಮಾಚರಣೆ ಅಂಗವಾಗಿ ಜುಲೈ 28ರಂದು ಸಂಜೆ 5.30ಕ್ಕೆ ದೇಶಪಾಂಡೆ ನಗರದ ಸವಾಯಿ ಗಂಧರ್ವ ಕಲಾಭವನದಲ್ಲಿ ‘ನೃತ್ಯ ಕಾರ್ಯಕ್ರಮ’ ಹಮ್ಮಿಕೊಳ್ಳಲಾಗಿದೆ’ ಎಂದು ಸಂಸ್ಥೆಯ ಸಂಯೋಜಕ ಸುಜಯ ಶಾನಭಾಗ ಹೇಳಿದರು.
ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿ ಸಾಧ್ವಿ ಪಾಟೀಲ ಅವರು ಪುರಂದರ ದಾಸರ, ಕನಕದಾಸರ ಗೀತೆಗಳು, ಅಕ್ಕಮಹಾದೇವಿ ಅವರ ವಚನಗಳು ಹಾಗೂ ಕುವೆಂಪು, ದ.ರಾ. ಬೇಂದ್ರೆ, ಡಿ.ವಿ.ಜಿ ಅವರ ಸಾಹಿತ್ಯ ಆಧರಿಸಿ ರಚಿಸಿದ ಗೀತೆಗಳಿಗೆ ಸುಮಾರು ಒಂದು ಗಂಟೆ ಕಾಲ ಭರತನಾಟ್ಯ ಪ್ರಥಮ ಪಲ್ಲವ ನೃತ್ಯ ಪ್ರದರ್ಶನ ನೀಡಲಿದ್ದಾರೆ’ ಎಂದು ತಿಳಿಸಿದರು.
‘ಕಾರ್ಯಕ್ರಮಕ್ಕೆ ಮಾತಾ ಆಶ್ರಮದ ಮಾತಾಯಿ ತೇಜೋಮಯಿ ಚಾಲನೆ ನೀಡಲಿದ್ದು, ಮುಖ್ಯ ಅತಿಥಿಗಳಾಗಿ ಶಿಕ್ಷಣ ತಜ್ಞ ಶ್ರೀಧರ ಚಕ್ರವರ್ತಿ, ಪ್ರಕಾಶಕ ಎಂ.ಎ. ಸುಬ್ರಹ್ಮಣ್ಯ, ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ, ಭರತನಾಟ್ಯ ಕಲಾವಿದೆ ವಿದ್ಯಾರಾಣಿ ಎಂ.ಪಿ. ಹಾಗೂ ಅಂಕಣಕಾರ ರೋಹಿತ ಚಕ್ರತೀರ್ಥ ಭಾಗವಹಿಸಲಿದ್ದಾರೆ’ ಎಂದು ತಿಳಿಸಿದರು.
ಸಂಸ್ಥೆಯ ಟ್ರಸ್ಟಿ ಜಯವಂತ್ ಶಾನುಭಾಗಮ ಕಿರಣ ರಾವ್ ಪತ್ರಿಕಾಗೋಷ್ಠಿಯಲ್ಲಿ ಇದ್ದರು.