ಹುಬ್ಬಳ್ಳಿ: ಕೇಂದ್ರದಿಂದ ರಾಜ್ಯಕ್ಕೆ ಜಿಎಸ್ ಟಿ ಅಡಿಯಲ್ಲಿ ಎಷ್ಟು ಹಣ ಬಂದಿದೆ ಎಂಬುದರ ಬಗ್ಗೆ ರಾಜ್ಯ ಸರ್ಕಾರ ಶ್ವೇತ ಪತ್ರ ಹೊರಡಿಸಲಿ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಆಗ್ರಹಿಸಿದ್ದಾರೆ.
ಹಿಂದೆ ಕೇಂದ್ರ ಅಬಕಾರಿ ತೆರಿಗೆ ಇದ್ದಾಗ ರಾಜ್ಯದಿಂದ ಎಷ್ಟು ಹಣ ಹೋಗುತ್ತಿತ್ತು, ಎಷ್ಟು ಬರುತಿತ್ತು ಎಂದು ಹೇಳಲಿ. ಜಿಎಸ್ ಟಿ ನಂತರ ಎಷ್ಡು ಬರುತ್ತದೆ ಎಂದು ಸ್ಪಷ್ಟಪಡಿಸಲಿ. ಅದರ ಜತೆಗೆ ಶ್ವೇತ ಪತ್ರ ಹೊರಡಿಸಲಿ ಎಂದು ಅವರು ಹೇಳಿದರು.
ಶ್ರೀಕಾಂತ ಪೂಜಾರಿ ಮೇಲೆ 16 ಕೇಸ್ ಗಳು ಇವೆ ಎಂದು ಯಾವ ಆಧಾರದಲ್ಲಿ ಹೇಳಿದಿರಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರೇ, ನೀವು ಸರ್ವಾಧಿಕಾರಿನಾ? ಎಂದು ಪ್ರಶ್ನಿಸಿದ ಅವರು, ಪೂಜಾರಿ ವಿರುದ್ಧ ಕೇಸ್ ಗಳಿಲ್ಲ. ಮಾಹಿತಿ ಇಲ್ಲದೆ ಈ ರೀತಿ ಹೇಳಿಕೆ ನೀಡುವುದು ಸರಿಯೇ ಎಂದು ಕೇಳಿದರು.
ಜೋಶಿಯವರು ಕಾನೂನು ತಜ್ಞರಾ ಎಂದು ಸಿಎಂ ಕೇಳಿದ್ದರು. ನಾನು ಕೇಳುತ್ತೇನೆ ಸಿದ್ದರಾಮಯ್ಯನವರೆ ಯಾವ ಕಾನೂನು ಜ್ಞಾನದಡಿ 16 ಕೇಸ್ ಗಳು ಇವೆ ಎಂದು ಹೇಳಿದಿರಿ. ಕರಸೇವಕರು, ದತ್ತಪೀಠದ ಕೇಸ್ ಗಳನ್ನು ಕೆದಕುತ್ತಿರುವುದು ಮೂರ್ಖತನದ ಪರಮಾವಧಿಯಾಗಿದೆ ಎಂದ ಅವರು ಸಿದ್ದರಾಮಯ್ಯ, ಯತೀಂದ್ರ ಮತ ಪುಷ್ಟೀಕರಣಕ್ಕೆ ಮುಂದಾಗಿದ್ದಾರೆ ಎಂದರು.