ನವದೆಹಲಿ:– ಈ ವಾರಾಂತ್ಯದಲ್ಲಿ ದೇಶದ ಹಲವು ಭಾಗಗಳಲ್ಲಿ ಭಾರೀ ಮಳೆ ಸುರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಭಾರತೀಯ ಹವಾಮಾನ ಇಲಾಖೆ ಪ್ರಕಾರ ಶುಕ್ರವಾರದಿಂದ ಮುಂದಿನ ಸೋಮವಾರದವರೆಗೆ (ಡಿಸೆಂಬರ್ 15-18) ತಮಿಳುನಾಡು ಮತ್ತು ಕೇರಳದಾದ್ಯಂತ ಪ್ರತ್ಯೇಕ ಸ್ಥಳಗಳಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾಗುವ ಮುನ್ಸೂಚನೆ ನೀಡಿದೆ.
ಅಷ್ಟೇ ಅಲ್ಲದೆ ಶನಿವಾರದಿಂದ ಸೋಮವಾರದವರೆಗೆ (ಡಿಸೆಂಬರ್ 16-18) ದಕ್ಷಿಣ ತಮಿಳುನಾರು ಮತ್ತು ಭಾನುವಾರ ಮತ್ತು ಸೋಮವಾರದಂದು (ಡಿಸೆಂಬರ್ 17-18) ಕೇರಳದಲ್ಲಿ ಪ್ರತ್ಯೇಕ ಸ್ಥಳಗಳಲ್ಲಿ ಭಾರೀ ಮಳೆ (64.5-115.5 ಮಿಮೀ) ಬೀಳುವ ನಿರೀಕ್ಷೆಯಿದೆ ಎಂದು ತಿಳಿಸಿದೆ. ಇನ್ನು ಮುಂಜಾಗ್ರತಾ ಕ್ರಮವಾಗಿ ಈ ಎರಡು ರಾಜ್ಯಗಳ ಹಲವೆಡೆ ಯೆಲ್ಲೋ ಅಲರ್ಟ್ ಅನ್ನೂ ಘೋಷಣೆ ಮಾಡಲಾಗಿದೆ.
ತಮಿಳುನಾಡಿನ ನಾಗಪಟ್ಟಣಂ, ತಂಜಾವೂರು, ತಿರುವಾರೂರ್, ಪುದುಕೋಟೈ, ರಾಮನಾಥಪುರಂ, ತೂತುಕುಡಿ, ತಿರುನಲ್ವೇಲಿ ಮತ್ತು ಕನ್ಯಾಕುಮಾರಿ, ಕೇರಳದ ಎರ್ನಾಕುಲಂ ಸೇರಿದಂತೆ ವಾರಾಂತ್ಯದಲ್ಲಿ ಭಾರೀ ಮಳೆಯಾಗಲಿದೆ ಎಂದು ಎಚ್ಚರಿಕೆ ಸಂದೇಶವನ್ನು ರವಾನಿಸಿದೆ. ಈಗಾಗಲೇ ತಮಿಳುನಾಡಿನ ಚೈನ್ನೈನಲ್ಲಿ ಸುನಾಮಿಯಂತಹ ಮಳೆಯಾಗಿದ್ದು, ಆದ್ದರಿಂದ ಎಚ್ಚೆತ್ತುಕೊಳ್ಳುವಂತೆ ಮುಂಜಾಗ್ರತಾ ಕ್ರಮವಾಗಿ ಜಾಗೃತರಾಗಿರಲು ಸಲಹೆಯನ್ನು ಕೂಡ ನೀಡಲಾಗಿದೆ.