ಮನೆಗೆ ನುಗ್ಗಿದ ಆಗಂತುಕನ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿದ್ದ ನಟ ಸೈಫ್ ಅಲಿ ಖಾನ್ ಸದ್ಯ ಚೇತರಿಸಿಕೊಳ್ಳುತ್ತಿದ್ದಾರೆ. ಶಸ್ತ್ರ ಚಿಕಿತ್ಸೆ ಬಳಿಕ ಮನೆಯಲ್ಲಿಯೇ ವಿಶ್ರಾಂತಿ ಪಡೆಯುತ್ತಿರುವ ಸೈಫ್ ಘಟನೆಯ ಬಳಿಕ ಇದೇ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಕದಿಯಲು ಮನೆಯೊಳಗೆ ನುಗ್ಗಿದ್ದ ಕಳ್ಳ ದಾಳಿ ಮಾಡಿದಾಗ ಸೈಫ್ ಅವರಿಗೆ ಹಲವು ಗಾಯಗಳು ಆಗಿದ್ದವು. ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹಾಗಿದ್ದರೂ ಕೂಡ ಆ ಕಳ್ಳನ ಬಗ್ಗೆ ಸೈಫ್ ಅಲಿ ಖಾನ್ ಅವರು ಕರುಣೆ ತೋರಿಸಿದ್ದಾರೆ.
ಸೈಫ್ ಅಲಿ ಖಾನ್ ಅವರು ಇನ್ಮುಂದೆ ಹೆಚ್ಚು ಎಚ್ಚರಿಕೆಯಿಂದ ಇರಬೇಕು. ತಮ್ಮ ರಕ್ಷಣೆಗಾಗಿ ವೆಪನ್ ಇಟ್ಟುಕೊಳ್ಳಬೇಕು ಎಂದು ಕೆಲವರು ಅಭಿಪ್ರಾಯ ತಿಳಿಸಿದ್ದುಂಟು. ಆ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸೈಫ್ ಉತ್ತರಿಸಿದ್ದಾರೆ. ‘ಏನೂ ಬದಲಾಗಲ್ಲ. ನನಗೆ ಅಪಾಯ ಇದೆ ಎಂದು ನಾನು ಭಾವಿಸಿಲ್ಲ. ಕಳ್ಳ ಪ್ಲ್ಯಾನ್ ಮಾಡಿ ಈ ದಾಳಿ ಮಾಡಿಲ್ಲ. ನನಗೆ ಅನಿಸಿದ ಹಾಗೆ ಆತನ ದರೋಡೆ ಪ್ರಯತ್ನ ವಿಫಲ ಆಗಿದೆ. ಆತ ಪಾಪ.. ನನಗಿಂತಲೂ ಅವನ ಜೀವನ ಹಾಳಾಗಿದೆ’ ಎಂದು ಸೈಫ್ ಅಲಿ ಖಾನ್ ಹೇಳಿದ್ದಾರೆ.
ಸಾಮಾನ್ಯವಾಗಿ ಇಂಥ ಘಟನೆಗಳು ನಡೆದ ಬಳಿಕ ಸೆಲೆಬ್ರಿಟಿಗಳು, ಉದ್ಯಮಿಗಳು ತಮ್ಮ ರಕ್ಷಣೆಗಾಗಿ ಗನ್ ಇಟ್ಟುಕೊಳ್ಳಲು ಬಯಸುತ್ತಾರೆ. ಆದರೆ ಸೈಫ್ ಅಲಿ ಖಾನ್ ಅವರು ಗನ್ ಸಹವಾಸವೇ ಬೇಡ ಎನ್ನುತ್ತಿದ್ದಾರೆ. ಒಂದು ವೇಳೆ ಮನೆಯಲ್ಲಿ ಗನ್ ಇದ್ದರೆ ಅದನ್ನು ಮಕ್ಕಳು ಮುಟ್ಟುವ ಸಾಧ್ಯತೆ ಇರುತ್ತದೆ. ಗನ್ ಇದ್ದಲ್ಲಿ ಅಪಾಯ ಖಂಡಿತವಾಗಿಯೂ ಇರುತ್ತದೆ ಎಂಬ ಕಾರಣದಿಂದ ಸೈಫ್ ಅಲಿ ಖಾನ್ ಅವರು ಗನ್ ಇಟ್ಟುಕೊಳ್ಳುವುದಿಲ್ಲ ಎಂದಿದ್ದಾರೆ. ಸೈಫ್ ಹೇಳಿಕೆಗೆ ಸಾಕಷ್ಟು ಮಂದಿ ಮೆಚ್ಚುಗೆ ಸೂಚಿಸಿದ್ದಾರೆ.