ಚಿಕ್ಕಬಳ್ಳಾಪುರ: ಕೇಂದ್ರ ಸಚಿವ ಕುಮಾರಸ್ವಾಮಿ ಅವರ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದೆ. ಸುಮ್ಮನೇ ಪೇಪರ್ ತೋರಿಸ್ತಾರೆ. ಎಲ್ಲ ಅರ್ಧಂಬರ್ಧ ಹೇಳಿ ಹೋಗ್ತಾರೆ. ಅವರಿಗೆ ಭಾಷೆ ಸಮಸ್ಯೆಯಿಂದ ರಾಜ್ಯದ ಮೇಲೆ ಹೆಚ್ಚು ಪ್ರೀತಿ ಬಂದುಬಿಟ್ಟಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ.ಸಿ. ಸುಧಾಕರ್ ಕಿಡಿಕಾರಿದರು. ಸುದ್ದಿಗಾರರ ಜತೆ ಮಾತನಾಡಿದ ಅವರು,
ಕುಮಾರಸ್ವಾಮಿ ಅವರು ಕೇಂದ್ರದಲ್ಲಿ ಸಚಿವರಾಗಿದ್ದಾರೆ. ಆದರೆ ಅವರಿಗೆ ಸರಿಯಾದ ಇಂಗ್ಲಿಷ್ ಮತ್ತು ಹಿಂದಿ ಭಾಷೆ ಬಾರದ ಕಾರಣ ಅವರಿಗೆ ಅಲ್ಲಿರಲು ಆಗುತ್ತಿಲ್ಲ. ಹೀಗಾಗಿ ರಾಜ್ಯದಲ್ಲಿ ಏನೇನೋ ಆರೋಪಗಳನ್ನು ಮಾಡುತ್ತಿದ್ದಾರೆ. ಮುಡಾದಲ್ಲಿ ಅವರ ಸಂಬಂಧಿಕರದ್ದೇ 40ಕ್ಕಿಂತ ಹೆಚ್ಚು ಸೈಟುಗಳಿವೆ. ಅದಕ್ಕೆಲ್ಲಾ ಮೊದಲು ಉತ್ತರ ಕೊಡಲಿ ಎಂದು ಹೇಳಿದರು.
ಮುಡಾ ವಿಚಾರದಲ್ಲಿ ಮನೆಯಿಂದ ಹೊರಗಡೆ ಬಾರದ ಸಿಎಂ ಸಿದ್ದರಾಮಯ್ಯ ಪತ್ನಿ ವಿರುದ್ಧ ಆರೋಪಗಳನ್ನು ಮಾಡಿದ್ದು ಅವರಿಗೆ ನೋವಾಗಿದೆ. ಹೀಗಾಗಿ ಅವರು ಮುಡಾ ಸೈಟ್ಗಳನ್ನು ವಾಪಸ್ ಮಾಡುವ ನಿರ್ಧಾರಕ್ಕೆ ಬಂದಿದ್ದಾರೆ. ತನ್ನ ಪತಿಗೆ ಇದರಿಂದ ತೊಂದರೆಯಾಗುವುದು ಬೇಡ ಎಂದು ಅವರು ತೀರ್ಮಾನ ತೆಗೆದುಕೊಂಡಿದ್ದಾರೆ. ನನ್ನ ಪ್ರಕಾರ ಇದರಲ್ಲಿ ಸಿಎಂ ತಪ್ಪು ಏನೂ ಇಲ್ಲ ಎಂದು ತಿಳಿಸಿದರು.