ನವದೆಹಲಿ:- ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅಕ್ರಮ ಎಸಗುವವರಿಗೆ ಗರಿಷ್ಠ 10 ವರ್ಷ ಜೈಲು ಹಾಗೂ ₹1 ಕೋಟಿ ವರೆಗೆ ದಂಡ ವಿಧಿಸುವುದಕ್ಕೆ ಅವಕಾಶ ಕಲ್ಪಿಸುವ ಸಾರ್ವಜನಿಕ ಪರೀಕ್ಷೆ (ಅಕ್ರಮಗಳ ತಡೆ) ಮಸೂದೆ 2024 ಅನ್ನು ಲೋಕಸಭೆ ಮಂಗಳವಾರ ಅಂಗೀಕರಿಸಿದೆ.
ವಿರೋಧ ಪಕ್ಷದ ಸದಸ್ಯರು ಪ್ರಸ್ತಾಪಿಸಿದ ಕೆಲವು ತಿದ್ದುಪಡಿಗಳನ್ನು ತಿರಸ್ಕರಿಸಿದ ನಂತರ ಲೋಕಸಭೆಯು ಮಸೂದೆಯನ್ನು ಅಂಗೀಕರಿಸಿತು. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ನಕಲು, ಅಕ್ರಮ ತಡೆಗಾಗಿ ಕೇಂದ್ರ ಸರ್ಕಾರವು ಲೋಕಸಭೆಯಲ್ಲಿ ಮಂಡಿಸಿದ ಸಾರ್ವಜನಿಕ ಪರೀಕ್ಷೆ (ಅಕ್ರಮಗಳ ತಡೆ) ವಿಧೇಯಕಕ್ಕೆ ಅಂಗೀಕಾರ ದೊರೆತಿದೆ. ವಿಧೇಯಕಕ್ಕೆ ಲೋಕಸಭೆಯಲ್ಲಿ ಅಂಗೀಕಾರ ದೊರೆತಿದ್ದು, ಬಳಿಕ ರಾಜ್ಯಸಭೆಯಲ್ಲಿ ಮಂಡಿಸಲಾಗುತ್ತದೆ. ರಾಜ್ಯಸಭೆಯಲ್ಲೂ ಅಂಗೀಕಾರ ದೊರೆತ ನಂತರ ರಾಷ್ಟ್ರಪತಿ ಸಹಿಗೆ ಕಳುಹಿಸಲಾಗುತ್ತದೆ. ರಾಷ್ಟ್ರಪತಿ ಅಂಗೀಕಾರದ ಬಳಿಕ ವಿಧೇಯಕವು ಕಾಯ್ದೆಯಾಗಿ ಜಾರಿಗೆ ಬರಲಿದೆ.
ಸ್ಪರ್ಧಾತ್ಮಕ ಪರೀಕ್ಷೆ ನಡೆಯುವ ವೇಳೆ ನಕಲು ಮಾಡಿದವರು, ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಮಾಡಿದವರು ಸೇರಿ ಹಲವು ರೀತಿಯ ಅಕ್ರಮ ಎಸಗಿದವರಿಗೆ ಕಠಿಣ ಶಿಕ್ಷೆ ವಿಧಿಸುವ ದಿಸೆಯಲ್ಲಿ ವಿಧೇಯಕ ಮಂಡಿಸಲಾಗಿದೆ. ಕರ್ನಾಟಕದಲ್ಲಿ ಭುಗಿಲೆದ್ದ ಪಿಎಸ್ಐ ನೇಮಕಾತಿ ಹಗರಣವು ದೇಶಾದ್ಯಂತ ಸುದ್ದಿಯಾದ ಬೆನ್ನಲ್ಲೇ ಕೇಂದ್ರ ಸರ್ಕಾರ ಹೊಸ ವಿಧೇಯಕ ಮಂಡಿಸಿರುವುದು ಮಹತ್ವ ಪಡೆದಿದೆ
ಸಾರ್ವಜನಿಕ ಪರೀಕ್ಷೆಗಳ (ಅನ್ಯಾಯ ವಿಧಾನಗಳ ತಡೆಗಟ್ಟುವಿಕೆ) ಮಸೂದೆ, 2024 ಅನ್ನು ಪ್ರಾಯೋಗಿಕವಾಗಿ ನಡೆಸುತ್ತಿರುವ ಕೇಂದ್ರ ಸಚಿವ ಜಿತೇಂದ್ರ ಸಿಂಗ್, ಪ್ರಸ್ತಾವಿತ ಕಾನೂನನ್ನು ಪ್ರತಿಭಾನ್ವಿತ ವಿದ್ಯಾರ್ಥಿಗಳು ಮತ್ತು ಅಭ್ಯರ್ಥಿಗಳ ಹಿತಾಸಕ್ತಿ ಕಾಪಾಡಲು ಉದ್ದೇಶಿಸಲಾಗಿದೆ ಎಂದು ಹೇಳಿದರು.
ವಿಧೇಯಕದಲ್ಲಿನ ಪ್ರಮುಖಾಂಶಗಳು
1.ಪ್ರಶ್ನೆ ಪತ್ರಿಕೆಗಳನ್ನು ಸೋರಿಕೆ ಮಾಡುವವರಿಗೆ ಕನಿಷ್ಠ 3-5 ವರ್ಷಗಳ ಜೈಲು ಶಿಕ್ಷೆ, 10 ಲಕ್ಷ ರೂ. ದಂಡ ಸೇರಿದಂತೆ ಕಠಿಣ ಕ್ರಮಗಳನ್ನು ಸೂಚಿಸುತ್ತದೆ. ಸಂಘಟಿತ ಅಪರಾಧ ಪ್ರಕರಣಗಳಲ್ಲಿ 5-10 ವರ್ಷಗಳ ಸಜೆ, 1 ಕೋಟಿ ರೂ. ದಂಡ ದೊರೆಯಲಿದೆ.
2. ಈ ಕಾನೂನಿನ ವ್ಯಾಪ್ತಿಯು ಕೇಂದ್ರ ಮತ್ತು ರಾಜ್ಯ ಲೋಕಸೇವಾ ಆಯೋಗಗಳು, ರೈಲ್ವೆ ಮತ್ತು ವೈದ್ಯಕೀಯ, ಎಂಜಿನಿಯರಿಂಗ್ ಮತ್ತು ವಿಶ್ವವಿದ್ಯಾಲಯದ ಪ್ರವೇಶ ಪರೀಕ್ಷೆ ಸೇರಿ ವಿವಿಧ ಸಾರ್ವಜನಿಕ ಪರೀಕ್ಷೆಗಳನ್ನು ಒಳಗೊಂಡಿದೆ.
3.ಶಿಕ್ಷಣ ಸಂಸ್ಥೆಗಳು ಅಕ್ರಮಗಳಲ್ಲಿ ತೊಡಗಿದ್ದರೆ ಆಸ್ತಿಯ ಜಪ್ತಿಯ ಜತೆಗೆ ಪರೀಕ್ಷಾ ವೆಚ್ಚ ವಸೂಲಿ ಮಾಡಲಾಗುವುದು.
4.ಅಕ್ರಮಗಳು ಕಂಡುಬಂದರೆ ಪರೀಕ್ಷೆಗಳನ್ನು ನಡೆಸುವ ಸೇವಾ ಪೂರೈಕೆದಾರ ಸಂಸ್ಥೆಗಳಿಗೆ 1 ಕೋಟಿ ರೂ.ಗಳವರೆಗೆ ದಂಡ ವಿಧಿಸುವ ಬಗ್ಗೆ ಪ್ರಸ್ತಾವವಿದೆ. ಅಂತಹ ಸಂಸ್ಥೆಗಳು ಅಕ್ರಮ ಎಸಗಿರುವುದು ಸಾಬೀತಾದರೆ ನಾಲ್ಕು ವರ್ಷಗಳವರೆಗೆ ಸಾರ್ವಜನಿಕ ಪರೀಕ್ಷೆಗಳನ್ನು ಆಯೋಜಿಸುವುದನ್ನು ನಿರ್ಬಂಧಿಸಲಾಗುವುದು.
5.ಪರೀಕ್ಷಾ ಅಕ್ರಮಗಳಲ್ಲಿ ತೊಡಗುವ ಸಂಘಟಿತ ಗ್ಯಾಂಗ್, ಮಾಫಿಯಾಗಳನ್ನು ನಿಯಂತ್ರಿಸುವ ಉದ್ದೇಶವನ್ನು ಮಸೂದೆ ಹೊಂದಿದೆ.
6.ಪ್ರಶ್ನೆ ಪತ್ರಿಕೆ ಸೋರಿಕೆಯ ತನಿಖೆಯನ್ನು ಉಪ ಪೊಲೀಸ್ ವರಿಷ್ಠಾಧಿಕಾರಿ ಅಥವಾ ಸಹಾಯಕ ಪೊಲೀಸ್ ಆಯುಕ್ತರ ಶ್ರೇಣಿಗಿಂತ ಕಡಿಮೆಯಿಲ್ಲದ ಅಧಿಕಾರಿ ನಡೆಸಲಿದ್ದಾರೆ. ತನಿಖೆಯನ್ನು ಯಾವುದೇ ಕೇಂದ್ರ ಸಂಸ್ಥೆಗೆ ಒಪ್ಪಿಸುವ ಅಧಿಕಾರ ಕೇಂದ್ರ ಸರ್ಕಾರದ ಬಳಿಯೇ ಇರಲಿದೆ.
7.ಈ ಕಾಯಿದೆ ಅಭ್ಯರ್ಥಿಯ ರಕ್ಷಣೆಗೆ ಒತ್ತು ನೀಡುತ್ತದೆ.