ಭಾರತ ಟೆಸ್ಟ್ ತಂಡದಲ್ಲಿ ಅವಕಾಶ ಸಿಗದ ಬಗ್ಗೆ ಆಂಧ್ರ ಬ್ಯಾಟ್ಸ್ಮನ್ ಹನುಮ ವಿಹಾರಿ ಬೇಸರ ವ್ಯಕ್ತಪಡಿಸಿದ್ದಾರೆ. ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ 2022ರ ಜುಲೈನಲ್ಲಿ ಕೊನೆಯ ಬಾರಿ ಭಾರತ ತಂಡದಲ್ಲಿ ಆಡಿದ್ದರು. ಅಂದಿನಿಂದ ಇಲ್ಲಿಯವರೆಗೂ ಅವರು ಟೀಮ್ ಇಂಡಿಯಾಗೆ ಕಮ್ಬ್ಯಾಕ್ ಮಾಡಲು ಸಾಧ್ಯವಾಗಿಲ್ಲ.
ಪ್ರಸ್ತುತ ಅಂಧ್ರ ಪರ ರಣಜಿ ಟ್ರೋಫಿ ಟೂರ್ನಿಯಲ್ಲಿ ಹನುಮ ವಿಹಾರಿ ಆಡುತ್ತಿದ್ದಾರೆ. ಪ್ರಸಕ್ತ ಆವೃತ್ತಿಯಲ್ಲಿ ಅವರು 7 ಇನಿಂಗ್ಸ್ಗಳಿಂದ 365 ರನ್ಗಳನ್ನು ದಾಖಲಿಸಿದ್ದಾರೆ. ಬಂಗಾಳ ಎದುರು ಅರ್ಧಶತಕದ ಮೂಲಕ ಶುಭಾರಂಭ ಕಂಡಿದ್ದ ಅವರು, ಛತ್ತೀಸ್ಗಢ ವಿರುದ್ಧ 183 ರನ್ಗಳನ್ನು ಸಿಡಿಸಿದ್ದರು.
“ಇತ್ತೀಚೆಗೆ ನನ್ನ ಬಳಿ ಯಾರೂ ಕೂಡ ಮಾತನಾಡಲಿಲ್ಲ. ಆದರೆ, ಕೊನೆಯ ಬಾರಿ ರಾಹುಲ್ ದ್ರಾವಿಡ್ ಅವರು ನನ್ನ ಬಳಿ ಮಾತನಾಡಿ, ನಾನು ಯಾವ ಜಾಗದಲ್ಲಿ ಸುಧಾರಣೆ ಕಾಣಬೇಕು ಎಂಬ ಬಗೆ ತಿಳಿಸಿದ್ದರು. ಇದಾದ ಬಳಿಕ ಇಲ್ಲಿಯವರೆಗೂ ಯಾರು ಕೂಡ ನನ್ನನ್ನು ಸಂಪರ್ಕಿಸಿಲ್ಲ,” ಎಂದು ಆಂಧ್ರ ಬ್ಯಾಟ್ಸ್ಮನ್ ತಿಳಿಸಿದ್ದಾರೆ. “ಯಾವುದೇ ನಿರೀಕ್ಷೆಗಳು ಇಲ್ಲದ ಒಂದು ಹಂತದಲ್ಲಿ ಇದೀಗ ನಾನಿದ್ದೇನೆ. ಬ್ಯಾಟ್ ಮಾಡುವ ಪ್ರತಿಯೊಂದು ಸಂದರ್ಭದಲ್ಲಿ ನನ್ನಿಂದ ಸಾಧ್ಯವಾದಷ್ಟು ಉತ್ತಮ ಪ್ರದರ್ಶನವನ್ನು ತೋರುತ್ತಿದ್ದೇನೆ. ಮುಂದೆ ಏನಾದರೂ ನಡೆಯುತ್ತದೋ ನಡೆಯಲಿ,” ಎಂದು ಹನುಮ ವಿಹಾರಿ ಹೇಳಿದ್ದಾರೆ. 16 ಟೆಸ್ಟ್ ಪಂದ್ಯಗಳಿಂದ ಹನುಮ ವಿಹಾರಿ 33.56ರ ಸರಾಸರಿಯಲ್ಲಿ 839 ರನ್ ಗಳಿಸಿದ್ದಾರೆ. ಇದರಲ್ಲಿ ಒಂದು ಶತಕ ಹಾಗೂ 5 ಅರ್ಧಶತಕಗಳನ್ನು ಸಿಡಿಸಿದ್ದಾರೆ.